ಮೈಸೂರು: ಕೌಟುಂಬಿಕ ಕಥಾಹಂದರ ಹೊಂದಿರುವ ಅಗ್ರಸೇನಾ ಚಲನಚಿತ್ರ ಜೂ.23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಚಲನಚಿತ್ರವಾಗಿರುವ ಕಾರಣ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕಿ ಮಮತಾ ಜಯರಾಂರೆಡ್ಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿದ್ದು, ಖ್ಯಾತ ಗಾಯಕರು ಹಾಡಿದ್ದಾರೆ. ಈ ಚಲನಚಿತ್ರದಲ್ಲಿ ಕತೆಯೇ ಮುಖ್ಯ ಪಾತ್ರ ವಹಿಸುತ್ತದೆ. ಕೌಟುಂಬಿಕ ಸಂಬಂಧ, ಭಾವನೆಗಳು ಹದಗೆಡುತ್ತಿರುವ ಈ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶ ಚಿತ್ರದ್ದಾಗಿದೆ ಎಂದರು.
ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಉತ್ತಮ ಚಿತ್ರ ನಿರ್ಮಾಣ ಮಾಡಿದಲ್ಲಿ ಜನರು ವೀಕ್ಷಿಸುತ್ತಾರೆಂಬ ವಿಶ್ವಾಸದಿಂದ ಚಿತ್ರ ನಿರ್ಮಿಸಲಾಗಿದೆ ಎಂದರು.
ನಾಯಕ ನಟ ಅಮರ್ ವಿರಾಜ್ ಮಾತನಾಡಿ, ಚಿತ್ರ ಕೌಟುಂಬಿಕ ಕತೆ ಹೊಂದಿದ್ದು, ಕುಟುಂಬ ಸಮೇತ ಎಲ್ಲರೂ ಕುಳಿತು ನೋಡಬಹುದಾದ ಚಿತ್ರವಾಗಿದೆ. ಸಂಬಂಧದ ಬೆಲೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಾಹಸ ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಎಂ.ಎಸ್.ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಹೊಸಬರ ಚಿತ್ರಗಳು ಚೆನ್ನಾಗಿದ್ದರೆ ಪ್ರೇಕ್ಷಕರು ನೋಡೇ ನೋಡುತ್ತಾರೆ. ಕುಟುಂಬ ಸಮೇತ ನೋಡುವ ಚಿತ್ರವಾದ್ದರಿಂದ ನಮ್ಮ ಚಿತ್ರ ಯಶಸ್ವಿಯಾಗುತ್ತದೆ ಎಂದು ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ನಿರ್ದೇಶಕ ವೆಂಕಟ್ ಹಾಜರಿದ್ದರು.