ಮೈಸೂರು: ರಾಷ್ಟ್ರದ ಹಿತದೃಷ್ಟಿಯಿಂದ ಹಿಂದುಗಳ ಸಂಘಟನೆ ಮಾಡುವುದು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅವಶ್ಯಕತೆಯಾಗಿದೆ ಎಂದು ಆರ್ ಎಸ್ ಎಸ್ ನ ಹಿರಿಯ ಪ್ರಚಾರಕರಾದ ಸು.ರಾಮಣ್ಣ ತಿಳಿಸಿದರು.
ಶನಿವಾರ ನಗರ ಮಾನಸ ಗಂಗೋತ್ರಿ ಯಲ್ಲಿ ನಡೆದ ಮ.ವೆಂಕಟರಾಮು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡಿದ ಅವರು, ಹಿಂದುಗಳ ಸಂಘಟನೆ ಬಗ್ಗೆ ಕೆಲವರು ತಪ್ಪು ತಿಳಿವಳಿಕೆ ಒಳಗಾಗಿದಿದ್ದಾರೆ. ಈ ಬಗ್ಗೆ ಹಿಂದುಗಳು ಎಚ್ಚೆತ್ತು ಕೊಳ್ಳಬೇಕು. ಯಾವುದೇ ಅಪಪ್ರಚಾರಗಳಿಗೆ ಒಳಗಾಗಬಾರದು. ಪ್ರಸ್ತುತ ದಿನಗಳಲ್ಲಿ ಹಿಂದುಗಳ ಸಂಘಟನೆ ದೇಶಕ್ಕೆ ಎಷ್ಟು ಅವಶ್ಯಕ ವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ದಲಿತರಿಗೆ ರಾಜಕೀಯ ಮೀಸಲಾತಿ ಇದ್ದರಷ್ಟೇ ಸಾಲದು, ಸಾಮಾರಸ್ಯ ಕೂಡಾ ಇರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇದನ್ನು ಹೇಳಿದ್ದಾರೆ. ಅಸ್ಪೃಶ್ಯತೆ ಯ ಆಚರಣೆ, ಕೀಳು ಮಟ್ಟದ ನಡುವಳಿಕೆ ಇನ್ನೂ ಹೋಗಿಲ್ಲ. ನಮ್ಮನ್ನು ನಾವು ವಂಚನೆ ಮಾಡಿಕೊಳ್ಳಬಾರದು. ಸಾಮರಸ್ಯ ದ ಮೂಲಕ ಹಿಂದು ಸಮಾಜದ ಸಂಘಟನೆ ಮಾಡಬೇಕು. ಸಾಮರಸ್ಯ ವೇ ಸಮಾಜದ ಸಂಘಟನೆಗೆ ಆಧಾರವಾಗಿರಬೇಕು ಎಂದು ತಿಳಿಸಿದರು.
ಆರ್ ಎಸ್ ಎಸ್ ಈ ದೇಶದ ಆಸ್ತಿ. ಸಾಮರಸ್ಯ ಸಂಘದ ಪ್ರೋಗ್ರಾಂ ಅಲ್ಲ, ಘೋಷಣೆ ಯೂ ಅಲ್ಲ,ಕೊಡುವ ವಿಚಾರವೂ ಅಲ್ಲ. ಅದು ಸಂಘದ ಸಹಜವಾದ ಸಂಸ್ಕೃತಿ. ಸಂಘಕ್ಕೆ ಬಂದ ಮೇಲೆ ಸಹಜವಾಗಿಯೇ ಸಾಮರಸ್ಯ ಹರಡಿ ಹೋಗುತ್ತದೆ ಎಂದು ಹೇಳಿದರು.