ಚಾಮರಾಜನಗರ: ಹನೂರು ತಾಲೂಕು ಸುಳ್ವಾಡಿ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟ ಕುಟುಂಬದವರಿಗೆ ಹಾಗೂ ಸಂತ್ರಸ್ತರ ನೆಮ್ಮದಿ ಜೀವನಕ್ಕೆ ಶಾಶ್ವತವಾಗಿ ನೆರವಾಗುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಹನೂರು ತಾಲೂಕಿನ ಬಿದರಹಳ್ಳಿಯಲ್ಲಿಂದು ಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿರುವ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಳ್ವಾಡಿ ಪ್ರಕರಣದಲ್ಲಿ ನೊಂದ ಸಂತ್ರಸ್ತರಿಗೆ ಅರ್ಥಿಕವಾಗಿ ಶಕ್ತಿ ತುಂಬಬೇಕಿದೆ. ಅವರ ಬದುಕಿಗೆ ನೆರವಾಗಬೇಕಾಗಿದೆ. ಭೂಮಿ ಇಲ್ಲದವರಿಗೆ ಹಾಗೂ ಕೂಲಿ ಕೆಲಸ ಮಾಡುವ ಕುಟುಂಬಗಳಿಗೆ ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುವಂತೆ ಅರ್ಥಿಕ ಶಕ್ತಿ ತುಂಬುವ ಸಲುವಾಗಿ ಪೈಲಟ್ ಪ್ರಾಜೆಕ್ಟ್ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಸಂತ್ರಸ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಉತ್ತಮ ಜೀವನಕ್ಕಾಗಿ ಸರ್ಕಾರ ನಿಮ್ಮೊಂದಿಗಿದೆ. ಪ್ರಸಾದ ಸೇವನೆ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಯಾವುದೇ ರಾಜಿಗೆ ಅವಕಾಶವಿಲ್ಲ. ಸಂತ್ರಸ್ತರು ತೊಂದರೆಯಿಲ್ಲದ ಜೀವನ ನಿರ್ವಹಣೆ ಮಾಡಲು ಅವರಿಗೆ ಎಲ್ಲಾ ಅವಶ್ಯಕ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ ಪರಿಹಾರವಾಗಿ ಒಟ್ಟಾರೆ 80 ಲಕ್ಷ ರೂ. ಗಳ ಹಣ ಬಿಡುಗಡೆ ಮಾಡಲಾಗಿದೆ. ಭೂಮಿ ಇಲ್ಲದ ಸಂತ್ರಸ್ತರಿಗೆ ಭೂ ಓಡೆತನ ಯೋಜನೆಯಡಿ ಜಮೀನು ಒದಗಿಸಲಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವತಿಯಿಂದ ಜಮೀನು ಹೊಂದಿರುವ ಸಂತ್ರಸ್ತರಿಗೆ 35 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಸಹಾಯಧನದ ಜೊತೆಗೆ ಫಲಾನುಭವಿಗಳು ವೈಯಕ್ತಿಕವಾಗಿ ಪಾವತಿಸಬೇಕಾಗಿರುವ ಹಣವನ್ನು ಸಹ ಬೇರೆ ರೀತಿಯಲ್ಲಿ ನೀಡಲು ಜಿಲ್ಲಾಧಿಕಾರಿಯವರು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಆರಂಭದಲ್ಲಿ ಮೃತರ ಗೌರವಾರ್ಥ 2 ನಿಮಿಷಗಳ ಮೌನ ಆಚರಿಸಲಾಯಿತು. ಪ್ರತಿ ಸಂತ್ರಸ್ತರ ಕುಟುಂಬದವರೊಂದಿಗೆ ಸಮಾಲೋಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂತ್ರಸ್ತರ ಕಷ್ಟ, ನೋವುಗಳನ್ನು ಆಲಿಸಿದರು. ವೈಯಕ್ತಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಂತ್ರಸ್ತರು ಹೇಳಿಕೊಂಡರು. ಸಾವಕಾಶವಾಗಿ ಎಲ್ಲವನ್ನು ಆಲಿಸಿದ ಮುಖ್ಯಮಂತ್ರಿಯವರು ಧೈರ್ಯವಾಗಿರಿ. ನಿಮಗೆ ನೀಡಬೇಕಿರುವ ಎಲ್ಲಾ ಸಹಾಯವನ್ನು ಒದಗಿಸಲಿದ್ದೇವೆ ಎಂದು ಸಂತ್ರಸ್ತರಲ್ಲಿ ಆತ್ಮವಿಶ್ವಾಸ ತುಂಬಿದರು. ಸಂತ್ರಸ್ತರು ಅವರ ಕುಂದುಕೊರತೆಗಳನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಆಗಬೇಕಾಗಿರುವ ಪರಿಹಾರಗಳಿಗೆ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.