ಮೈಸೂರು: ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಮೈಸೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆ ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯ. ಹೀಗಾಗಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ.
ಕರ್ನಾಟಕ ಪೌರ ನಿಗಮ ಕಾಯ್ದೆ 1976 ಸೆಕ್ಷನ್ 343 ರಂತೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೋಟೆಲ್, ಕ್ಯಾಂಟಿನ್, ದರ್ಶಿನಿ, ಫಾಸ್ಟ್ ಫುಡ್ ಉದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು.
ತಟ್ಟೆ ಮತ್ತು ಲೋಟಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆದು ಶುಚಿಗೊಳಿಸಬೇಕು. ನೆಲ ಮತ್ತು ಟೇಬಲ್ ಗಳನ್ನು ಕ್ರಿಮಿನಾಶಕ ಉಪಯೋಗಿಸಿ, ಶುಚಿಗೊಳಿಸಬೇಕು. ಅಡುಗೆ ಮನೆ ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು.
ಆಹಾರ ಪದಾರ್ಥಗಳ ತಯಾರಿಕೆಗೆ ಉಪಯೋಗಿಸುವ ದಿನಸಿ ಪದಾರ್ಥ ಉತ್ತಮ ಗುಣಮಟ್ಟದ್ದಾಗಿರಬೇಕು. ಕರ್ನಾಟಕ ಪೌರ ನಿಗಮ ಕಾಯ್ದೆ ಸೆಕ್ಷನ್ 336 ರಂತೆ ಹೋಟೆಲ್ ನ ಸುತ್ತಮುತ್ತಲ ಆವರಣ ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು.
ಸಪ್ಲಾಯರ್ ಗಳು ಆರೋಗ್ಯವಂತರಾಗಿರಬೇಕು ಹಾಗೂ ಅವರು ಗ್ರಾಹಕರಿಗೆ ಊಟ ತಿಂಡಿ ಸರಬರಾಜು ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಎಪ್ರಾನ್ ಮತ್ತು ಗ್ಲೌಸ್ ಹಾಕಿಕೊಂಡಿರಬೇಕು.
ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ನೀರಿನ ಸೌಲಭ್ಯವಿರಬೇಕು ಹಾಗೂ ಆಗಿಂದಾಗ್ಯೆ ಶುಚಿಗೊಳಿಸಬೇಕು. ಸೆಕ್ಷನ್ 382 ರಂತೆ ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್ ಒಳಗಡೆ ಇಡಬೇಕು. ಆಯಾ ಹೊತ್ತಿನಲ್ಲಿ ಸಿದ್ದಪಡಿಸಲಾದ ತಿಂಡಿ ಪದಾರ್ಥಗಳನ್ನು ಆಯಾ ಹೊತ್ತಿಗೆ ಮುಗಿಸಬೇಕು ( ಅಂದರೆ ಬೆಳಿಗ್ಗೆ ತಯಾರಿಸಿದ ತಿಂಡಿಯನ್ನು ಮಧ್ಯಾಹ್ನ ಅಥವಾ ಸಂಜೆಗಾಗಲೀ ಉಪಯೋಗಿಸಬಾರದು ) ಹೋಟೆಲ್ ಆವರಣವನ್ನು ದಿನನಿತ್ಯ ನಾಲ್ಕೈದು ಬಾರಿ ಕ್ರಿಮಿನಾಶಕ ಉಪಯೋಗಿಸಿ ಶುಚಿಗೊಳಿಸುವುದರ ಜೊತೆಗೆ ಗ್ರಾಹಕರಿಗೆ ಬಿಸಿಯಾದ, ಶುಚಿಯಾದ ಆಹಾರವನ್ನು ಸರಬರಾಜು ಮಾಡುವುದು.
ಫುಟ್ಪಾತ್ ನಲ್ಲಿ ತಿಂಡಿ ಪದಾರ್ಥ ಮಾರಾಟ ಮಾಡುವವರು, ಕೊಯ್ದ ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಹಾಗೂ ಧೂಳು ಬೀಳದಂತೆ ಗಾಜಿನ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಇಟ್ಟು ಮಾರಾಟ ಮಾಡುವಂತೆ ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದು, ಆರೋಗ್ಯ ಕಾಪಾಡುವ ಮತ್ತು ರೋಗ ಹರಡದಂತೆ ಎಲ್ಲರೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.