ಮೈಸೂರು: ಸುಖಾ ಸುಮ್ಮನೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನಿಮಗೆ ದೃಷ್ಟಿ ದೋಷವಿದೆ. ಜತೆಗೆ ವಯಸ್ಸಾಗುತ್ತಿರುವುದರಿಂದ ಚಿಕಿತ್ಸೆಯ ಅಗತ್ಯವಿದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಾವ ಆಧಾರದ ಮೇಲೆ ಆರೆಸ್ಸೆಸ್ನನ್ನು ಭಯೋತ್ಪಾದಕ ಸಂಘಟನೆ ಎಂದು ಅಪಪ್ರಚಾರ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಅವರು ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶುಲ್ಕವಿಲ್ಲದೇ, ಯಾವುದೇ ಆದಾಯ ನಿರೀಕ್ಷಿಸದೇ ಸಹಸ್ರಾರು ಮಕ್ಕಳಿಗೆ ಆರೆಸ್ಸೆಸ್ ಶಿಕ್ಷಣ ನೀಡುತ್ತಿದೆ. ಸಿದ್ದರಾಮಯ್ಯನವರಿಗೆ ದೃಷ್ಟಿದೋಷ ಇರುವುದರಿಂದ ಇದೆಲ್ಲ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ದೇಶದ ಜನತೆಗೆ ಆರೆಸ್ಸೆಸ್ ದೇಶ ಭಕ್ತ ಸಂಘಟನೆ ಎಂಬುದು ತಿಳಿದಿದೆ. ಹೀಗಾಗಿ ಜನತೆಗೆ ಆರೆಸ್ಸೆಸ್ ಏನು ಎಂಬುದರ ಬಗ್ಗೆ ಸಿದ್ದರಾಮಯ್ಯ ಅವರ ಸರ್ಟಿಫಿಕೆಟ್ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಈಗಲಾದರೂ ಸುಳ್ಳು ಹೇಳುವುದನ್ನು ಬಿಡಬೇಕು. ಮುಂದಿನ ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಿ, ಆರೆಸ್ಸೆಸ್ನ್ನು ಪ್ರಶಂಸಿಸುವ ಕಾಲ ದೂರವಿಲ್ಲ ಎಂದು ತಿರುಗೇಟು ನೀಡಿದರು.
ನಮಗೆ ಆರೆಸ್ಸೆಸ್ ಮಾತೃ ಸಂಸ್ಥೆ. ನಮಗೂ ಮತ್ತು ಆ ಸಂಘಟನೆಗೂ ತಾಯಿ ಮಗುವಿನ ಸಂಬಂಧ ಇದ್ದಂತೆ. ಆದರೆ ಟಿಪ್ಪು ಕನ್ನಡ ವಿರೋಧಿ, ಮೇಲುಕೋಟೆಯಲ್ಲಿ ನರಮೇಧ ಮಾಡಿದ, ಶ್ರೀರಂಗಪಟ್ಟಣದಲ್ಲಿ ದೇಗುಲವನ್ನು ಮಸೀದಿಯಾಗಿ ಪರಿರ್ತಿಸಿದ ಎಂದರೆ ಉರಿದು ಬೀಳುವ ಸಿದ್ದರಾಮಯ್ಯನವರೆ ನಿಮಗೂ ಟಿಪ್ಪುವಿಗೂ ಏನು ಸಂಬಂಧ, ಮುಚ್ಚಿಟ್ಟುಕೊಂಡಿರುವ ಆ ಸಂಬಂಧ ಯಾವುದು ಎಂದು ಪ್ರಶ್ನಿಸಿದರು.
ದೇಶದ ವಿರುದ್ಧ ಇಲ್ಲಿರುವ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸಮಕಾಲೀನರಾದ ದಲಿತ ಮುಖಂಡ ಜೋಗೇಂದ್ರ ನಾಥ ಮಂಡಲ್, ಮಹಮ್ಮದ್ ಅಲಿ ಜಿನ್ನಾ ಮಾತು ನಂಬಿ ಪಾಕಿಸ್ತಾನಕ್ಕೆ ಹೋಗುತ್ತಾರೆ. ಆ ಬಳಿಕ ಅಲ್ಲಿನ ಅಸಹಿಷ್ಣುತೆ, ಹಿಂಸೆ ತಾಳಲಾರದೆ 5 ವರ್ಷಗಳಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ವಾಪಾಸ್ ಬರುತ್ತಾರೆ. ಇದನ್ನು ಎಲ್ಲರೂ ತಿಳಿಯಬೇಕು ಎಂದರು.