ಮೈಸೂರು: ತಂಬಾಕು ಬೆಳೆ ನಾಶದಿಂದ ಸಾಲಗಾರನಾದ ರೈತನೊಬ್ಬ ತಂಬಾಕು ಹದ ಮಾಡುವ ಬ್ಯಾರಲ್ ಮನೆಯಲ್ಲೇ ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನೆ ಸಾಲಿಗ್ರಾಮದಲ್ಲಿ ನಡೆದಿದೆ.
ಸಾಲಿಗ್ರಾಮದ ನಿವಾಸಿ ದಿವಂಗತ ಚಲುವೇಗೌಡರ ಪುತ್ರ ಎಸ್.ಸಿ.ಹರೀಶ್ (45) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಗ್ರಾಮದಲ್ಲಿ ಸುಮಾರು ಐದು ಎಕರೆ ಜಮೀನು ಹೊಂದಿದ್ದು, ಇದರಲ್ಲಿ ಭತ್ತ ಹಾಗೂ ತಂಬಾಕು ಬೆಳೆಯುತ್ತಿದ್ದರು. ಈ ನಡುವೆ ತಂಬಾಕಿಗೆ ಹೆಚ್ಚಿನ ಒತ್ತು ನೀಡಿ ಲಾಭ ಪಡೆಯುವ ಉದ್ದೇಶದಿಂದ ಹೆಚ್ಚಿನ ಬಂಡವಾಳ ಹಾಕಿ ತಂಬಾಕನ್ನು ಬೆಳೆಯಲು ಮುಂದಾಗಿದ್ದರು. ತಂಬಾಕು ಕೃಷಿಗೆ ಗೊಬ್ಬರ ಮತ್ತು ತಂಬಾಕು ಹದ ಮಾಡಲು ಸೌದೆ ಇನ್ನಿತರ ಖರ್ಚಿಗಾಗಿ ಸಾಲಿಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು ಮೂರು ಲಕ್ಷ ರೂ., ಚಿನ್ನಾಭರಣ ಅಡವಿಟ್ಟು ಎಸ್ಬಿಐ ಬ್ಯಾಂಕ್ ನಲ್ಲಿ ಮೂರು ಲಕ್ಷ ಹೀಗೆ ಆರು ಲಕ್ಷ ರೂ.ಗಳನ್ನು ಸಾಲ ಮಾಡಿಕೊಂಡಿದ್ದರು.
ಆದರೆ ಈ ಬಾರಿ ಆರಂಭದಲ್ಲಿ ಸರಿಯಾಗಿ ಮಳೆಯಾಗದೆ ಕೈಕೊಟ್ಟ ಹಿನ್ನಲೆಯಲ್ಲಿ ತಂಬಾಕು ಬೆಳೆ ಸಂಪೂರ್ಣ ನಾಶವಾಗಿದ್ದು, ಕೃಷಿಗೆ ಹಾಕಿದ್ದ ಹಣವೆಲ್ಲ ಮಣ್ಣುಪಾಲಾಗಿತ್ತು. ಇದರಿಂದ ನೊಂದ ಅವರು, ಸೋಮವಾರ ಬೆಳಿಗ್ಗೆ ಜಮೀನಿಗೆ ತೆರಳಿದ್ದು, ಅಲ್ಲಿದ್ದ ತಂಬಾಕು ಬ್ಯಾರಲ್ ಮನೆಯಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದಾದ ಬಳಿಕ ಹರೀಶ್ ಪುತ್ರ ಮನೋಜ್ ಬ್ಯಾರಲ್ ಮನೆಯಲ್ಲಿದ್ದ ದನಗಳನ್ನು ಹೊರ ಕಟ್ಟಲು ತೆರಳಿದಾಗ ಅಲ್ಲಿ ತಂದೆ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.