ಮೈಸೂರು- ಶರನ್ನ ನವರಾತ್ರಿಗೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು, ಈ ಮಧ್ಯೆ ಸಂಪ್ರದಾಯಕವಾಗಿ ಅರಮನೆಯಲ್ಲಿ ನಡೆಯುವ ನವರಾತ್ರಿಗೆ ಸಿದ್ದತೆಗಳು ಆರಂಭವಾಗಿದ್ದು, ಅರಮನೆಯಲ್ಲಿ ನಡೆಯುವ ಶರನ್ನ ನವರಾತ್ರಿಯ ಧಾರ್ಮಿಕ ಪೂಜಾ ಕೈಂಕರ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರ ನಡೆಸುವ ನಾಡ ಹಬ್ಬ ದಸರಾ ಒಂದು ಕಡೆಯಾದರೆ ಸಂಪ್ರದಾಯಕವಾಗಿ ಶತಮಾನಗಳಿಂದ ರಾಜಮನೆತನದಲ್ಲಿ ನಡೆಯುವ ನವರಾತ್ರಿ ಪೂಜೆಗಳು ಮಹತ್ವವನ್ನ ಪಡೆದಿದ್ದು, ಪ್ರತಿವರ್ಷವೂ 10 ದಿನಗಳ ಕಾಲ ಅರಮನೆಯಲ್ಲಿ ನಡೆಯುವ ನವರಾತ್ರಿ ಪೂಜಾ ಕೈಂಕರ್ಯಗಳು ಮಹತ್ವವನ್ನು ಪಡೆದಿವೆ.
ಈ ನವರಾತ್ರಿ ಪೂಜೆಯಲ್ಲಿ ತುಂಬಾ ನಿಷ್ಟೆಯಿಂದ ಮಹಾರಾಜ ಯದುವೀರ್ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳುತ್ತಾರೆ. ಅದರಂತೆ ಈ ಬಾರಿ ಅರಮನೆಯಲ್ಲಿ ನಡೆಯಲಿರುವ ಶರನ್ನ ನವರಾತ್ರಿಯ ಪೂಜಾ ವಿವರಗಳು ಇಂತಿದೆ.
ಸೆಪ್ಟೆಂಬರ್ 15 ರಂದು ಬೆಳಗ್ಗೆ 7.45 ರಿಂದ 8.45ರವರೆಗೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ನವಗ್ರಹ ಹೋಮ, ಶಾಂತಿ ಪೂಜೆ ನವರಾತ್ರಿಯ ಆರಂಭದ ಪೂಜಾ ವಿಧಿವಿಧಾನಗಳು ಆರಂಭವಾಗಲಿದ್ದು, 9.45 ರಿಂದ 10.15ರವರೆಗೆ ಅಂಬಾವಿಲಾಸ್ ನ ದರ್ಬಾರ್ ಹಾಲ್ ನಲ್ಲಿ ಗೆಜ್ಜಗನಹಳ್ಳಿ ಗ್ರಾಮಸ್ಥರಿಂದ ಪ್ರಮೋದಾದೇವಿ ಒಡೆಯರ್ ಅವರ ಸಮ್ಮಖದಲ್ಲಿ ಸಿಂಹಾಸನ ಜೋಡಾಣೆ ನಡೆಯಲಿದೆ.
ಸೆಪ್ಟೆಂಬರ್ 21 ರಂದು ನವರಾತ್ರಿ ಆರಂಭವಾಗಲಿದ್ದು, ಬೆಳಗ್ಗೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬೆಳಗ್ಗೆ 7.55 ನಿಮಿಷದಿಂದ 8.15 ನಿಮಿಷದವರೆಗೆ ರಾಜ ಲಾಂಛನ ಸಿಂಹಾಸನಕ್ಕೆ ಸಿಂಹ ಜೋಡಣೆಯಾಗಲಿದೆ. 8.20ರಿಂದ 9.10 ರವರೆಗೆ ಚಾಮುಂಡಿ ತೊಟ್ಟಿಯಲ್ಲಿ ಯದೂವೀರ್ ಗೆ ಕಂಕಣಧಾರಣೆಯಾಗಲಿದ್ದು, 11.15ಕ್ಕೆ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆಗಳಿಗೆ ಸಾವರಿ ತೊಟಿಯಲ್ಲಿ ಪೂಜೆಯನ್ನ ನಡೆಸಲಿದ್ದು, 12 ಗಂಟೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದೆ. ಮಧ್ಯಾಹ್ನ 12.45 ರಿಂದ 12.55ರೊಳಗಿನ ಶುಭ ಲಗ್ನದಲ್ಲಿ ಮಹಾರಾಜ ಯದೂವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಸಿಂಹಾಸನ ರೋಹಣ ನಡೆಸಲಿದ್ದು, ಸಿಂಹಾಸನ ರೋಹಣದ ನಂತರ ಧಾರ್ಮಿಕ ವಿಧಿ ವಿಧಾನಗಳ ನಂತರ ಸಿಂಹಾಸನದಲ್ಲಿ ಕೂತು ದರ್ಬಾರ್ ನಡೆಸಲಿದ್ದಾರೆ. ನಂತರ 1.35 ರಿಂದ 1.45 ರವರೆಗೆ ಕನ್ನಡಿ ತೊಟ್ಟಿಯಲ್ಲಿ ನಾಡ ಅಧಿ ದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಲಿದ್ದಾರೆ.
ಇದರ ಜೊತೆಗೆ ಪ್ರತಿಧಿನ ಸಂಜೆ ಧಾರ್ಮಿಕ ವಿಧಿ ವಿಧಾನಗಳ ನಂತರ ಖಾಸಗಿ ದರ್ಬಾರ್ ನೆಡಸುವ ಯದೂವೀರ್ ಸೆಪ್ಟೆಂಬರ್ 27ರಂದು ಬೆಳಗ್ಗೆ 9.15 ರಿಂದ 9.45ರೊಳಗಿನ ಶುಭ ಲಗ್ನದಲ್ಲಿ ವಿಧ್ಯಾದೇವತೆಗೆ ಸರಸ್ವತಿ ಪೂಜೆ ಸಲ್ಲಿಸಲಿದ್ದು ನಂತರ ಅಂದೇ ರಾತ್ರಿ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನೆರವೇರಲಿದೆ.
29 ರಂದು ಆಯುಧ ಪೂಜೆ: ಸಂಪ್ರದಾಯದಂತೆ ಸೆಪ್ಟೆಂಬರ್ 29ರಂದು ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿಕಾ ಹೋಮ ಆರಂಭವಾಗಲಿದ್ದು, ಬೆಳಗ್ಗೆ 6.45 ರಿಂದ 7.25ರವರೆಗೆ ಆನೆ ಭಾಗಿಲಿನ ಬಳಿ ಪಟ್ಟದ ಆನೆ, ಹಸು, ಕುದುರೆಗಳು ಆಗಮಿಸಲಿದ್ದು, ಆನೆ ಭಾಗಿಲಿನ ಮೂಲಕ ಆಯುಧಗಳನ್ನ ಕೋಡಿ ಸೋಮೇಶ್ವರ ದೇಗುಲಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಪುರಾತನ ಭಾವಿಯಿಂದ ನೀರನ್ನ ತೆಗೆದು ಆಯುಧಗಳನ್ನ ಸ್ವಚ್ಚಗೊಳಿಸಿ ಅಲ್ಲೇ ಪೂಜೆ ಮುಗಿಸಿ ಆ ಆಯುಧಗಳನ್ನ ಪುನಃ ಅರಮನೆಗೆ ಮಂಗಳವಾಧ್ಯಗಳ ಮೂಲಕ ತರಲಾಗುವುದು.
ಅರಮನೆಯಲ್ಲಿ ಬೆಳಗ್ಗೆ 8.45 ರಿಂದ 9 ಗಂಟೆಯವರೆಗೆ ಚಂಡಿಕಾಹೋಮ ಪುರ್ನಾವತಿ ಆಗಲಿದ್ದು, ಮಧ್ಯಾಹ್ನ 12.15 ರಿಂದ ಕಲ್ಯಾಣ ಮಂಟಪದ ತೊಟ್ಟಿಯಲ್ಲಿ ಆಯುಧ ಪೂಜೆ ವಿಧಿವಿಧಾನಗಳು ಆರಂಭವಾಗಲಿದ್ದು ರಾತ್ರಿ 7 ಗಂಟೆಗೆ ಖಾಸಗಿ ದರ್ಬಾರ್ ನಡೆಸಿ ಸಿಂಹಾಸನವನ್ನ ವಿಸರ್ಜನೆ ಮಾಡಲಾಗುವುದು. ತದ ನಂತರ ಯದೂವೀರ್ ದೇವರ ಮನೆಯಲ್ಲಿ ನವರಾತ್ರಿಯ ಕಂಕಣ ವಿಸರ್ಜನೆ ಮಾಡುತ್ತಾರೆ.
30 ರಂದು ವಿಜಯದಶಮಿ: ಬೆಳಗ್ಗೆ 11 ಗಂಟೆಗೆ ಕಲ್ಯಾಣಿ ತೊಟ್ಟಿಯ ಮೂಲಕ ಪಟ್ಟದ ಆನೆ, ಹಸು, ಕುದುರೆಯ ಜೊತೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ರಾಜನನ್ನ ಮೆರವಣಿಗೆ ಮೂಲಕ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಶಮ್ಮಿ ವೃಕ್ಷಕ್ಕೆ ಕರೆತಂದು ಅಲ್ಲಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ವಿಜಯ ದಶಮಿ ಯಾತ್ರಿ ಕೈಗೊಳ್ಳಲಾಗುತ್ತದೆ. ಆ ಮೂಲಕ ಮಹಾರಾಜರ ಅರಮನೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ತೆರೆಬೀಳಲಿದೆ.
ಅಕ್ಟೋಬರ್ 14 ರಂದು ಬೆಳಗ್ಗೆ 10.45 ರಿಂದ 11.45ರ ಶುಭ ಲಗ್ನದಲ್ಲಿ ಸಿಂಹಾಸನವನ್ನ ವಿಸರ್ಜನೆ ಮಾಡಲಾಗುವುದು ಎಂದು ಅರಮನೆಯ ಮೂಲಗಳು ಖಚಿತಪಡಿಸಿದ್ದು, ಅರಮನೆಯಲ್ಲಿ ನಡೆಯುವ ನವರಾತ್ರಿ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಒಂದೆರೆಡು ದಿನಗಳಲ್ಲಿ ಪ್ರಮೋದಾದೇವಿ ಒಡೆಯರ್ ಅರಮನೆಯ ಪೂರೋಹಿತರ ಪಂಚಾಂಗ ಪ್ರಕಾರ ಪೂಜಾ ಕೈಂಕರ್ಯದ ಸಮಯವನ್ನ ತಿಳಿಸಲಿದ್ದಾರೆ ಎಂದು ಅರಮನೆಯ ಆಪ್ತ ಕಾರ್ಯದರ್ಶಿ ಖಚಿತ ಪಡಿಸಿದ್ದಾರೆ.