ಮೈಸೂರು: ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಮೈಸೂರು ದಸರಾ ಜಂಬೂಸವಾರಿಯೊಂದಿಗೆ ಸಂಪನ್ನಗೊಳ್ಳಲಿದ್ದು, ಜಂಬೂಸವಾರಿ ಸಂಜೆ ನಡೆಯಲಿರುವ ಕಾರಣ ಈಗಾಗಲೇ ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಂಬೂಸವಾರಿ ಅರಮನೆ ಆವರಣದಲ್ಲಿ ನಡೆಯಲಿದ್ದು, ಈ ಸುಂದರ ಕ್ಷಣಗಳನ್ನು ತುಂಬಿಕೊಳ್ಳಲು ಕೇವಲ 500 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಅರಮನೆ ಸುತ್ತಲಿನ ರಸ್ತೆಗಳಲ್ಲಿ ಇಂದು(ಅ.15) ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗಣ್ಯರು ಪ್ರವೇಶಿಸುವ ಕಡೆ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಆಹ್ವಾನಿತರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ನೀಡಲಾಗಿದೆ. ಇಲ್ಲಿ ಒಟ್ಟು 500 ಮಂದಿಗೆ ಮಾತ್ರ ಅವಕಾಶವಿದ್ದು ಉಳಿದಂತೆ ಯಾರನ್ನೂ ಒಳಬಿಡಲಾಗುತ್ತಿಲ್ಲ. ಅರಮನೆಯ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.
ಪ್ರತಿ ವರ್ಷ ಜಂಬೂ ಸವಾರಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ. ದೂರ ಸಾಗುತ್ತಿತ್ತು. ಈ ವೇಳೆ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತು ನಿಂತು ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಅರಮನೆ ಆವರಣಕ್ಕಷ್ಟೆ ಸೀಮಿತವಾಗಿದೆ. ಹೀಗಾಗಿ ಜಂಬೂಸವಾರಿಯನ್ನು ಎಲ್ಲರೂ ತಾವಿದ್ದ ಕಡೆಯಿಂದಲೇ ವೀಕ್ಷಿಸಲು ಅನುಕೂಲವಾಗುವಂತೆ ವರ್ಚ್ಯುವಲ್ ಮೂಲಕ ಮೆರವಣಿಗೆಯನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ. ಮಾಧ್ಯಮಗಳು ಕೂಡ ಜಂಬೂಸವಾರಿಯ ನೇರಪ್ರಸಾರ ಮಾಡಲಿದ್ದು ವರ್ಚ್ಯುವಲ್ ಮೂಲಕ ಮೆರವಣಿಗೆಯನ್ನು ನೋಡಲು ಬಯಸುವವರು ಲಿಂಕ್ ಗಳನ್ನು ಬಳಸಬಹುದಾಗಿದೆ