ಮೈಸೂರು: ರಂಗಾಯಣವು ಮೈಸೂರಿನ ಖ್ಯಾತ ಕಾದಂಬರಿಕಾರ ಪದ್ಮಶ್ರೀ ಡಾ. ಎಸ್ ಎಲ್ ಬೈರಪ್ಪನವರ ಮಹತ್ವದ ಕಾದಂಬರಿ ‘ಪರ್ವ’ ವನ್ನು ರಂಗರೂಪವಾಗಿಸಿ ಈ ನಾಟಕದ ನಿರ್ದೇಶನ ಬಿರುಸಿನಿಂದ ನಡೆಯುತ್ತಿದೆ.
ಹೆಸರಾಂತ ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ‘ಪರ್ವ’ ಕಾದಂಬರಿಯ 200 ಪುಟಗಳ ರಂಗಪಠ್ಯವನ್ನು ಸಿದ್ಧಗೊಳಿಸಿದ್ದಾರೆ. ರಂಗಾಯಣದ ವಿನ್ಯಾಸಕಾರ ಹೆಚ್.ಕೆ ದ್ವಾರಕಾನಾಥ್ ರಂಗಸಜ್ಜಿಕೆ ವಿನ್ಯಾಸಗೊಳಿಸಿದ್ದು ಈಗಾಗಲೇ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿ ದೃಶ್ಯ ಸಂಯೋಜನೆಯ ಕಾರ್ಯದಲ್ಲಿ ತೊಡಗಿದ್ದಾರೆ.
ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಶುಕ್ರವಾರ ಭೈರಪ್ಪನವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿ ರಂಗಪಠ್ಯವನ್ನು ಅವರಿಗೆ ನೀಡಿದರು. ಇದರ ಇನ್ನೊಂದು ಪ್ರತಿಯನ್ನು ಓದು-ಅಭಿಪ್ರಾಯಕ್ಕಾಗಿ ಹನೂರು ಕೃಷ್ಣಮೂರ್ತಿಯವರಿಗೆ ನೀಡಿದ್ದಾರೆ.
ರಂಗಾಯಣದ ಕಲಾವಿದರೊಂದಿಗೆ ಸಂವಾದ ನಡೆಸಲು ಭೈರಪ್ಪನವರನ್ನು ಆಹ್ವಾನಿಸಿದಾಗ ಇದಕ್ಕೆ ಒಪ್ಪಿರುವ ಅವರು ವಿಧ್ವಾಂಸರಾದ ಶತಾವಧಾನಿ ಗಣೇಶ್ ಮತ್ತು ಲಕ್ಷ್ಮೀಶ ತೋಳ್ಪಾಡಿ ಅವರನ್ನು ಕರೆಸುವಂತೆ ಸಲಹೆ ನೀಡಿದರು. ಇದರ ಜೊತೆಗೆ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಾಶ್ ಬೆಳವಾಡಿಯವರು ರೂಪಿಸಿರುವ ‘ಪರ್ವ’ ರಂಗಪಠ್ಯವನ್ನು ಪ್ರಕಟಿಸಲು ಒಪ್ಪಿಗೆ ನೀಡಿ ಇದರಿಂದ ಪರ್ವದ ರಂಗಪ್ರಕಾರ ಬಹುಮಂದಿಗೆ ತಲುಪಲು ಸಾಧ್ಯವಾಗಲಿದೆ ಎಂದಿದ್ದಾರೆ.
ಅಡ್ಡಂಡ ಕಾರ್ಯಪ್ಪನವರು ಭೈರಪ್ಪನವರೊಂದಿಗೆ ಚರ್ಚಿಸಿ ಕಾದಂಬರಿಯ ಮೂಲ ಪಠ್ಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಬೆಳವಾಡಿಯವರು ಎಚ್ಚರ ವಹಿಸಿದ್ದು ಕಾದಂಬರಿಯ ಆಶಯಗಳನ್ನು ಯಥಾವತ್ತಾಗಿ ಇಡಲು ರಂಗಾಯಣ ಬದ್ಧವಾಗಿದೆ. ಪರ್ವ ಕಾದಂಬರಿ ರಂಗಾಯಣಕ್ಕೆ ಸವಾಲಿನ ಪ್ರಶ್ನೆ. ಈ ಸವಾಲನ್ನು ಸ್ವೀಕರಿಸಿ ಪ್ರಯೋಗದತ್ತ ಹೆಜ್ಜೆ ಇಟ್ಟಿದ್ದೇವೆ. 6 ಗಂಟೆಗಳ (2 ವಿರಾಮ ಸೇರಿ) ದೀರ್ಘ ಅವಧಿಯ ಪರ್ವ ನಾಟಕ ಪ್ರತಿ ದೃಶ್ಯದಲ್ಲೂ ನಾಟಕೀಯ ಅಂಶಗಳನ್ನು ಒಳಗೊಂಡು, ಈ ಪ್ರಯೋಗ ಆಧುನಿಕ ಕನ್ನಡ ರಂಗಭೂಮಿಗೆ ರಂಗಾಯಣದ ಕೊಡುಗೆ ಆಗಲಿದೆ ಎಂದು ಭೈರಪ್ಪನವರಿಗೆ ಭರವಸೆ ನೀಡಿದ್ದಾರೆ. ಈ ನಾಟಕ ಫೆಬ್ರವರಿ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧವಾಗಲಿದೆ ಎಂದು ಸಾಹಿತಿಗಳ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ತಿಳಿಸಿದ್ದಾರೆ.