ಮೈಸೂರು: ಮೈಸೂರು ನಗರದಲ್ಲಿ ಸರಗಳ್ಳತನ ಮರುಕಳಿಸಿದ್ದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿರುವ ಖದೀಮರು ವೃದ್ಧ ಮಹಿಳೆಗೆ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಚಿನ್ನದ ಸರದೊಂದಿಗೆ ಪರಾರಿಯಾಗಿರುವ ಘಟನೆ ಗಂಗೋತ್ರಿ ಕ್ಯಾಂಪಸ್ ನಲ್ಲಿ ನಡೆದಿದೆ.
ಸರಸ್ವತಿಪುರಂ ನಿವಾಸಿ ಸೌಭಾಗ್ಯ(67) ಎಂಬುವವರೆ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ. ಎಂದಿನಂತೆ ಮುಂಜಾನೆ 7.30 ಸಮಯದಲ್ಲಿ ಒಂಟಿಯಾಗಿ ಗಂಗೋತ್ರಿ ಕ್ಯಾಂಪಸ್ ನ ಗಾಂಧಿ ಭವನದ ಬಳಿ ವಾಕಿಂಗ್ ಮಾಡುತ್ತಿರುವಾಗ ಹಿಂದೆಯಿಂದ ಬೈಕ್ ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ತಲೆಗೆ ರಾಡಿನಿಂದ ಹೊಡೆದಿದ್ದಾರೆ. ಮಹಿಳೆ ತಲೆ ಸುತ್ತಿ ಕೆಳಗೆ ಬೀಳುತ್ತಿದ್ದಂತೆ ಮಹಿಳೆಯ ಕತ್ತಿಗೆ ಕೈ ಹಾಕಿ 55 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪ್ರಜ್ಞೆ ತಪ್ಪಿ ಬಿದಿದ್ದ ವೃದ್ಧ ಮಹಿಳೆಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸರಸ್ವತಿಪುರಂ ಠಾಣೆಯ ಪೊಲೀಸರು ಘಟನಾ ಸ್ಥಳದಲ್ಲಿ ಸಮೀಪವಿರುವ ಸಿಸಿಟಿವಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಅಲ್ಲದೆ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯಿಂದ ಹೇಳಿಕೆ ಪಡೆದಿರುವ ಪೊಲೀಸರು ಸರಗಳ್ಳರ ಪತ್ತೆ ತೀವ್ರ ಹುಡುಕಾಟ ಕೈಗೊಂಡಿದ್ದಾರೆ.