ಮೈಸೂರು: ಕಳೆದ ಕೆಲವು ಸಮಯಗಳಿಂದ ಚುನಾವಣೆಯ ಗುಂಗಿನಲ್ಲೇ ಕಳೆದಿದ್ದ ಅಭ್ಯರ್ಥಿಗಳು, ಚುನಾವಣೆ ಕಳೆದಿದ್ದರಿಂದ ಇದೀಗ ಸದ್ಯಕ್ಕೆ ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಬರೀ ರಾಜಕೀಯ ಭಾಷಣ ಮತ್ತು ಪ್ರಚಾರ ಮೊದಲಾದವುಗಳಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳು ಇದೀಗ ತಮ್ಮ ಕುಟುಂಬದೊಡನೆ ಜಾಲಿ ಮೂಡಿನಲ್ಲಿದ್ದಾರೆ.
ಈಗಾಗಲೇ ಮತದಾರರು ತಮ್ಮ ನಿರ್ಧಾರವನ್ನು ಮತದ ಮೂಲಕ ಮಾಡಿದ್ದು, ಯಾರಿಗೆ ಮತ ನೀಡಬೇಕೊ ಅದನ್ನು ಮಾಡಿದ್ದು ಮತದಾರರ ಹಕ್ಕು ಮತಯಂತ್ರದಲ್ಲಿ ದಾಖಲಾಗಿ ಸ್ಟ್ರಾಂಗ್ ರೂಂ ಸೇರಿದೆ. ಇನ್ನೂ ತಿಂಗಳು ಕಾಲವಿರುವುದರಿಂದಾಗಿ ಸದ್ಯಕ್ಕೆ ಏನೇ ಆತಂಕವಿದ್ದರೂ ಆ ವೇಳೆಗಾಗಲೇ ತಣ್ಣಗಾಗುತ್ತದೆ. ಆದರೆ ಗೆಲುವು ಸೋಲು ಇದ್ದದ್ದೇ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎಂಬುದರ ಚರ್ಚೆಯಲ್ಲಿ ಮತದಾರರು ತೊಡಗಿದ್ದರೆ ಅತ್ತ ಅಭ್ಯರ್ಥಿಗಳು ಅಬ್ಬಾ ಚುನಾವಣೆ ಮುಗಿಯಿತು ಒಂದಷ್ಟು ವಿಶ್ರಾಂತಿ ಪಡೆಯೋಣ ಎಂಬ ಖುಷಿಯಲ್ಲಿದ್ದಾರೆ. ಆದರೆ ಎಲ್ಲೋ ಒಂದು ಕಡೆಯಲ್ಲಿ ಫಲಿತಾಂಶದ ಭಯವೂ ಇಲ್ಲದಿಲ್ಲ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಗ್ಗೆ ಹೇಳುವುದಾದರೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯ್ ಶಂಕರ್ ಸದ್ಯ ರಿಲ್ಯಾಕ್ಸ್ ಮೂಡಿಗೆ ತೆರಳಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಬೆರೆತು ಊಟ ಖುಷಿ ಪಡುತ್ತಿದ್ದಾರೆ. ಸಮಾವೇಶ, ಪ್ರಚಾರ ಭಾಷಣ ಸೇರಿದಂತೆ ರಾತ್ರಿ ಹಗಲೆನ್ನದೆ ಮತದಾರರನ್ನು ಓಲೈಸಿಕೊಳ್ಳುವಲ್ಲಿ ಓಡಾಡುತ್ತಿದ್ದವರು ಚುನಾವಣೆ ಮುಗಿಯಿತು ಎಂದು ನೆಮ್ಮದಿಯುಸಿರು ಬಿಟ್ಟಿದ್ದಾರೆ
ತಮ್ಮ ಕುಟುಂಬದೊಂದಿಗೆ ಒಂದಷ್ಟು ಸಮಯವನ್ನು ಕಳೆಯುತ್ತಿದ್ದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯ್ಶಂಕರ್ ಈ ಕುರಿತಂತೆ ಮಾತನಾಡಿ, ಈ ಬಾರಿಯ ದಾಖಲೆಯ ಮತದಾನವಾಗಿರುವುದು ಖುಷಿಯ ವಿಚಾರವಾಗಿದೆ ಅಲ್ಲದೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದೆ ಶಾಂತಿಯುತವಾಗಿ ಚುನಾವಣೆ ನಡೆದಿರುವುದು ಸಮಾಧಾನ ಪಡುವಂತಾಗಿದೆ. ನನಗೆ ಗ್ರಾಮೀಣ ಭಾಗದಲ್ಲಿ ಉತ್ತಮ ರೀತಿಯ ಸ್ಪಂದನೆ ದೊರೆತಿದ್ದು ಜನ ನನ್ನ ಕೈಬಿಡದೆ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮಾತನಾಡಿ ಇದುವರೆಗೆ ಚುನಾವಣೆಯ ಪ್ರಚಾರ, ಸಮಾವೇಶದಲ್ಲಿ ತಲ್ಲೀನನಾಗಿದ್ದೆ. ಇದೀಗ ವಿರಾಮ ತೆಗೆದುಕೊಂಡು ಬೆಂಗಳೂರಿಗೆ ತೆರಳಿ ಅಲ್ಲಿಂದ ಬೀದರ್ ಗೆ ಹೋಗಿ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಈ ಸಲ ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿದ್ದು ಕೊಡಗಿನಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಕಂಡು ಬಂದಿದೆ. ಒಂದೊಳ್ಳೆಯ ಅಂತರದಲ್ಲಿ ಗೆಲುವು ನಿಶ್ಚಿತವಾಗಿ ಸಿಗಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.