ಮೈಸೂರು: ಪ್ರಕಾಶ ರೈ ನೀಡಿರುವ ಮಾನನಷ್ಟ ಮೊಕ್ಕದಮೆ ನೋಟಿಸ್ ನನಗೆ ತಲುಪಿಲ್ಲ. ಮಾಧ್ಯಮಗಳಲ್ಲಷ್ಟೇ ನೋಡಿರುವೆ. ನಾನು ಪ್ರಕಾಶ್ ರಾಜ್ ವಿರುದ್ಧ ಹೇಳಿಕೆ ನೀಡಿಲ್ಲ. ಪ್ರಕಾಶ್ ರೈ ವಿರುದ್ದ ಮಾತ್ರ ಟೀಕಿಸಿದ್ದೇನೆ ಎಂದು ಪ್ರಕಾಶ್ ರೈ ಹೇಳಿಕೆಗೆ ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದಾರೆ.
ನೀವು ಪ್ರಕಾಶ್ ರೈಯೋ..ಪ್ರಕಾಶ್ ರಾಜೋ ಮೊದಲು ಸ್ಪಷ್ಟಪಡಿಸಿ. ಕರ್ನಾಟಕದಲ್ಲಿದರೆ ಪ್ರಕಾಶ್ ರೈ ಅಂತೀರಿ, ತಮಿಳುನಾಡಿಗೆ ಹೋದ್ರೆ ಪ್ರಕಾಶ್ ರಾಜ್ ಆಗ್ತೀರಿ. ಇಲ್ಲಿ ಟಿವಿ ಆ್ಯಂಕರ್ ಕಾವೇರಿ ಸಮಸ್ಯೆ ಬಗ್ಗೆ ಕೇಳಿದರೆ ನಾನೊಬ್ಬ ನಟ ಅಂತೀರಿ, ತಮಿಳುನಾಡಿಗೆ ಹೋಗಿ ರೈತರ ಪರ ಪ್ರತಿಭಟನೆ ಮಾಡುತ್ತೀರಾ. ಮೊದಲು ಈ ಇಬ್ಬಂದಿಯ ನಾಟಕವನ್ನ ನಿಲ್ಲಿಸಿ.
ಗೌರಿ ಲಂಕೇಶ ಹತ್ಯೆಯಾದ ಸಮಯದಲ್ಲಿ ಪ್ರಧಾನಿ ಅವರನ್ನ ಪ್ರಶ್ನೆ ಮಾಡುತ್ತೀರಾ. ಕರ್ನಾಟಕದ ಕಾನೂನು ಸುವ್ಯವಸ್ಥೆ ಹಾಳಾಗಿದ್ದರೆ ಇಲ್ಲಿನ ಮುಖ್ಯಮಂತ್ರಿ, ಗೃಹ ಸಚಿವರನ್ನ ಪ್ರಶ್ನೆ ಮಾಡಿ, ವಿನಾಕಾರಣ ಪ್ರಧಾನಿ ಮೋದಿ ಹೆಸರನ್ನ ಎಳೆದು ತಂದಿದ್ದೀರಿ. ನಿಮ್ಮ ಹುಟ್ಟೂರಾದ ಬಂಟ್ವಾಳದಲ್ಲಿ ಶರತ್ ಮಡಿವಾಳ್ ಅವರ ಪೈಶಾಚಿಕ ಹತ್ಯೆಯಾಯಿತು. ಆಗ ನೀವು ಯಾವುದೇ ಪ್ರಶ್ನೆ ಮಾಡಲಿಲ್ಲ. ಪ್ರಧಾನಿ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಹಕ್ಕಿದ್ದರೆ ಬಗ್ಗೆ ಬೇರೆಯವರು ಪ್ರಶ್ನೆ ಮಾಡಲು ಹಕ್ಕಿರುತ್ತದೆ ಅರ್ಥ ಮಾಡಿಕೊಳ್ಳಬೇಕು.
ನಾನು ನಿಮ್ಮ ವೈಯ್ಯಕ್ತಿಕ ಜೀವನದ ಬಗ್ಗೆ ಎಂದೂ ಟೀಕೆ ಮಾಡಿಲ್ಲ. ಒಂದು ವೆಬ್ ಸೈಟ್ ನಲ್ಲಿ ಬಂದ ಟ್ವೀಟ್ ನ್ನ ನಾನು ರೀಟ್ವೀಟ್ ಮಾಡಿದ್ದೇನೆ. ಹಲವಾರು ಪತ್ರಿಕೆಗಳನ್ನ ನಿಮ್ಮ ವೈಯ್ಯಕ್ತಿಕ ಜೀವನದ ಬಗ್ಗೆ ಬಂದಿದೆ. ನೀವು ಮಾನನಷ್ಟ ಮೊಕ್ಕದಮೆ ಹಾಕುವುದಾದರೇ ವೆಬ್ ಸೈಟ್ ಹಾಗೂ ಪತ್ರಿಕೆಗಳ ಮೇಲೆ ಹಾಕಿ.
ವೈಯಕ್ತಿಕ ಜೀವನ ಕೂಡ ಈಗ ಸಾರ್ವಜನಿಕ ವಿಮರ್ಶೆಗೆ ಒಳಗಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಿಮಗೆ ಸಿನಿಮಾದಲ್ಲಿ ಚಲಾವಣೆ ಕಡಿಮೆಯಾಗಿ ಹೀಗೆ ವಿವಾದದ ಹೇಳಿಕೆ ಕೊಟ್ಟು ಚಲಾವಣೆಗೆ ಬರುವ ಪ್ರಯತ್ನ ಮಾಡುತ್ತಿದ್ದೀರಿ ಅನಿಸುತ್ತದೆ. ನಿಮಗೆ ನಿಜವಾಗಿ ರಾಜಕೀಯ ಮಾಡುವ ಆಸೆ ಇದ್ದರೆ ರಾಜಕೀಯಕ್ಕೆ ಬನ್ನಿ, ಅದನ್ನ ಬಿಟ್ಟು ಎರಡುತರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.