ಮಂಡ್ಯ: ಟಿಪ್ಪರ್ ಲಾರಿಯೊಂದು ಹರಿದು ತಾಯಿ, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಹಾಡ್ಯ ಗ್ರಾಮದ ಶಶಿಕಲಾ (35), ಲಾವಣ್ಯ (4) ಎಂದು ಗುರುತಿಸಲಾಗಿದ್ದು ಪತಿ ದೇವರಾಜು (45) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಡ್ಯ ಗ್ರಾಮದ ದೇವರಾಜು ಅವರು ಇಂದು ಬೆಳಿಗ್ಗೆ ಅನಾರೋಗ್ಯದ ನಿಮಿತ್ತ ಮಗಳಿಗೆ ಚಿಕಿತ್ಸೆ ಕೊಡಿಸಲು ತಮ್ಮ ಸ್ಕೂಟರ್ನಲ್ಲಿ ಹೆಂಡತಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದರು. ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಸ್ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್ನಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಸ್ಕೂಟರ್ಗೆ ಡಿಕ್ಕಿಯೊಡೆದಿದೆ. ಕೆಳಗೆ ಬಿದ್ದ ತಾಯಿ, ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಂಬುಲೆನ್ಸ್ನಲ್ಲಿ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.