ಮೈಸೂರು: ವಿದ್ಯುನ್ಮಾನ ವಾಹಿನಿಗಳು ಟಿಆರ್ ಪಿ ದಾಹದಲ್ಲಿ ಬೇರೆಯವರ ವೈಯಕ್ತಿಕ ಬದುಕಿನ ಚಾರಿತ್ರ್ಯವಧೆ ಮಾಡುವುದು ಒಳ್ಳೆಯದಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ರಾಮನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ 2017ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯುನ್ಮಾನ ಮಾಧ್ಯಮಗಳು ಸಕರಾತ್ಮಕ ವಿಚಾರಗಳನ್ನು ಬಿಂಬಿಸದೆ ನಕರಾತ್ಮಕ ವಿಚಾರಗಳನ್ನು ಬಿತ್ತರಿಸುವ ಮೂಲಕ ವ್ಯಕ್ತಿಗತ ಚಾರಿತ್ರ್ಯ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಮುದ್ರಣ ಮಾಧ್ಯಮದಲ್ಲಿ ಆಚಾತುರ್ಯತೆ ಕಡಿಮೆ. ಆದರೆ ವಾಹಿನಿಗಳು ಧಾವಂತದಲ್ಲಿ ಸುದ್ದಿಗಳನ್ನು ಬಿತ್ತರಿಸುವುದರಿಂದಾಗಿ ಆಚಾತುರ್ಯ ಹೆಚ್ಚುತ್ತಿದೆ. ಸುದ್ದಿಯನ್ನು ಬಿತ್ತರಿಸುವ ಮುನ್ನ ಪ್ರತಿಕ್ರಿಯೆ ಪಡೆಯಬೇಕು ಆದರೆ ಅದ್ಯಾವುದನ್ನೂ ಮಾಡದೆ ಕೇವಲ ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ಸಂಯಮ ಕಳೆದುಕೊಳ್ಳುವುದು ಕೆಟ್ಟ ಬೆಳವಣಿಗೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಓನಕೆ ಒಬ್ಬವ್ವ ಅವಮಾನ ಮಾಡಿರುವ ವಿಚಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ಅವರು ನನ್ನ ಬೆಂಬಲಿಗರಲ್ಲ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡುವುದೆಷ್ಟು ಸರಿ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂಪಾ ಬಗ್ಗೆ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮಾತನಾಡಲಾಗುತ್ತಿದೆ. ಮೈಸೂರು ಪೇಟ ಹಾಕಲ್ಲ, ಭುವನೇಶ್ವರ ದೇವಾಲಯಕ್ಕೆ ಹೋಗಲ್ಲ ಎಂದ ಮೇಲೆ ಮೈಸೂರಿಗೂ ಬರಬೇಡಿ ಎಂದು ಚಂಪಾ ಅವರಿಗೆ ಟಾಂಗ್ ನೀಡಿದರು. ಹೊರದೇಶದಲ್ಲಿ ಪತ್ರಿಕೆಗಳು ಅಸ್ತಿತ್ವಕಳೆದುಕೊಳ್ಳುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿಗೂ ಪತ್ರಿಕೆಗಳು ಅಸ್ತಿತ್ವ ಉಳಿಸಿಕೊಂಡಿವೆ. ಮಾಧ್ಯಮಗಳು ಕ್ರೈಂ, ರಾಜಕಾರಣದಿಂದಾಚೆಗೂ ಗಮನನೀಡಬೇಕಾಗಿದೆ ಎಂದರು.
ಹಿರಿಯಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ ಸುದ್ದಿಗಳು ಚಿಕ್ಕದಾದರೂ ಅವು ಬೀರುವ ಪ್ರಮಾಣ ಆಗಾಧವಾಗಿರುತ್ತದೆ. ಪತ್ರಕರ್ತರು ಪ್ರತಿಷ್ಠೆ ಬಿಟ್ಟು ಕೇಳಿ ತಿಳಿದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ಅವರು ಮಾತನಾಡಿ ಬದಲಾದ ಸಮಾಜದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಮುಂದೆಯೂ ಬದಲಾವಣೆಯಾಗಲಿರುವುದರಿಂದ ಈಗಿನಿಂದಲೇ ಆ ಬದಲಾವಣೆ ತಯಾರಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಹರೀಶ್ ಅವರಿಗೆ ವರ್ಷದ ಕನ್ನಡ ವರದಿ ಪ್ರಶಸ್ತಿ ಮತ್ತು ಹಿರಿಯ ಹವ್ಯಾಸಿ ಛಾಯಾಗ್ರಾಹಕ ಎಂ.ಎಸ್ ಬಸವರಾಜು ಅವರಿಗೆ ವರ್ಷದ ಛಾಯಾಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಧರ್ಮ ಪತ್ರಿಕೆ ಸಂಪಾದಕ ಕೆ.ವಿ.ಸಂಪತ್ ಕುಮಾರ್, ಪ್ರಜಾನುಡಿ ಪತ್ರಿಕೆ ವರದಿಗಾರ ರೇಣುಕಾ ತುಂಬಸೋಗೆ, ಕಸ್ತೂರಿ ವಾಹಿನಿಯ ಬಾಪುಲಿಂಗರಾಜೇ ಅರಸ್, ದಿಗ್ವಿಜಯ ವಾಹಿನಿಯ ಕ್ಯಾಮರಾಮನ್ ಟಿ.ಎಸ್.ಹೇಮಂತಕುಮಾರ್, ವಿಜಯಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ಎಚ್.ಎಲ್. ಶಾರದಾ ದತ್, ಹಿರಿಯ ಛಾಯಾಗ್ರಾಹಕ ನೇತ್ರರಾಜು ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಿ.ರಂದೀಪ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ ಹಾಗೂ ಉಪಾಧ್ಯಕ್ಷ ಸುಬ್ರಮಣ್ಯ, ಗ್ರಾಮಾಂತರ ಅಧ್ಯಕ್ಷ ಮಂಜುಕೋಟೆ ಉಪಸ್ಥಿತರಿದ್ದರು