ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನಿರ್ಗಮನದ ಬಾಗಿಲಿನಲ್ಲಿದೆ ಎಂದು ಮುಂದಿನ ವಿಧಾನಸಭೆ ಚುನಾವಣಾ ಪ್ರಚಾರ ಆರಂಭಿಸಿದರು.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕರ್ನಾಟಕದ ನನ್ನ ಪ್ರೀತಿಯ ಬಂಧುಭಗಿನಿಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ತನ್ನ ಭಾಷಣ ಆರಂಭಿಸಿದರು.
ಕೆಂಪೇಗೌಡ, ಬಸವೇಶ್ವರ, ಮಾದರ ಚೆನ್ನಯ್ಯ, ಕಿತ್ತೂರು ಚೆನ್ನಮ್ಮ, ಶಿಶುನಾಳ ಷರೀಫ ಮುಂತಾದ ಮಹಾನ್ ಪುರುಷರ ನಾಡು ಕರ್ನಾಟಕ. ಬೆಂಗಳೂರಿನಿಂದ ದೇಶಕ್ಕೆ ಗೌರವ ಬಂದಿದೆ. ರಾಜ್ಯದಲ್ಲಿ ಬದಲಾವಣೆಯಾಗಬೇಕಿದ್ದರೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅದು ಇಲ್ಲಿನ ಬಡಜನರನ್ನು ತಲುಪುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದಾಗ ಯೋಜನೆಗಳು ಕಟ್ಟಕಡೆಯ ಜನರನ್ನು ತಲುಪುವುದು ಮತ್ತು ರಾಜ್ಯವು ಅಭಿವೃದ್ಧಿಯಾಗುವುದು. ರಾಜ್ಯವು ಕೇಂದ್ರದ ಅನುದಾನ ಬಳಕೆ ಮಾಡುವಲ್ಲಿ ಎಡವಿದೆ ಎಂದು ಮೋದಿ ಟೀಕಿಸಿದರು.
ರಾಜ್ಯದಲ್ಲಿರುವ ಸರ್ಕಾರ ಜನರ ಕಾಳಜಿ ವಹಿಸುವುದಕ್ಕಿಂತ ಹೆಚ್ಚಾಗಿ ಸ್ವಹಿತಾಸಕ್ತಿಯತ್ತ ಗಮನ ಹರಿಸಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದು ಸಿದ್ದರಾಮಯ್ಯ ವಿರುದ್ಧ ಮೋದಿ ಟೀಕಾ ಪ್ರಹಾರ ನಡೆಸಿದರು.