ಬೆಂಗಳೂರು: ಮೌಂಟ್ ಏವರೆಸ್ಟ್ ಏರುವ ಮೂಲಕ ಕನ್ನಡದ ಪತಾಕೆ ಹಾರಿಸಿ ಬಂದ ವಿಕ್ರಮ್ ಅವರ ಸಾಧನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.
ಅರಣ್ಯ ಇಲಾಖೆಯ ಹುಣಸೂರಿನ ವೀರನಹೊಸಹಳ್ಳಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕ್ರಮ್ ಇತ್ತೀಚೆಗೆ ಮೌಂಟ್ ಏವರೆಸ್ಟ್ ಏರುವ ಮೂಲಕ ಏವರೆಸ್ಟ್ ಏರಿದ ಪ್ರಥಮ ಕನ್ನಡಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇವರನ್ನು ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿಗೆ ಕರೆದೊಯ್ದಿದ್ದು, ಈ ವೇಳೆ ಅವರೊಂದಿಗೆ ಉಭಯಕುಶಲೋಪರಿ ವಿಚಾರಿಸಿದ ಸಿಎಂ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಹುದ್ದೆಯಲ್ಲಿ ಮುಂಭಡ್ತಿ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಶಾಸಕ ಹೆಚ್.ವಿಶ್ವನಾಥ್ ಅವರು ವಿಕ್ರಮ್ ಅವರ ಮುಂದಿನ ಸಾಧನೆಗೆ ಪ್ರೋತ್ಸಾಹ ಮತ್ತು ಸಹಾಯ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.