ಮಾಗಡಿ: ಪಟ್ಟಣದ ಹೃದಯಭಾಗ ಕೆಂಪೇಗೌಡ ಕೋಟೆ ರಸ್ತೆಯಲ್ಲಿರುವ ಬೀದಿದೀಪದ ಕಂಬವೊಂದು ವಾಲಿಕೊಂಡು ನಿಂತಿದೆ. ಇದನ್ನು ತೆರವುಗೊಳಿಸಿ ನೂತನ ಕಂಬ ಅಳವಡಿಸದೆ ಹೋದರೆ ಮುಂದೊಂದು ದಿನ ಈ ಕಂಬ ಯಾರನ್ನಾದರೂ ಬಲಿಪಡೆಯುವುದರಲ್ಲಿ ಅನುಮಾನವೇ ಇಲ್ಲ.
ಪಟ್ಟಣದ ಕೋಟೆ ಮುಖ್ಯ ರಸ್ತೆಯಲ್ಲಿ ಪುರಸಭೆ ವತಿಯಿಂದ ಬೀದಿ ದೀಪ ಹಾಕಲಾಗಿದೆ, ಆದರೆ ನಿರ್ವಹಣೆಯಿಲ್ಲದೆ ಮಕ್ರ್ಯೂರಿ ಬಲ್ಬುಗಳು ಬಿದ್ದು ಹೋಗಿದ್ದು, ಕಂಬ ಕೂಡ ಬೀಳುವ ಹಂತಕ್ಕೆ ತಲುಪಿದೆ. ವಾಲಿ ನಿಂತಿರುವ ಈ ಕಂಬಗಳು ಸಾಮಾನ್ಯ ಜನರ ಕಣ್ಣಿಗೆ ಬೀಳುತ್ತದೆಯಾದರೂ ಸಂಬಂಧಿಸಿದ ಅಧಿಕಾರಿಗಳ ಕಣ್ಣಿಗೆ ಇನ್ನೂ ಕೂಡ ಬೀಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪುರಸಭೆ ಸದಸ್ಯರಾದ ಮಹೇಶ್ ಅವರು ಪುರಸಭೆ ವತಿಯಿಂದಲೇ ಬೀದಿ ದೀಪ ನಿರ್ವಹಣೆ ಮಾಡಬೇಕಾಗಿದೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಕೂಡ ಶಿಥಿಲಾವಸ್ಥೆಯಲ್ಲಿರುವ ಕಂಬಗಳನ್ನು ಬದಲಾಯಿಸುವಂತೆ ಸೂಚಿಸಲಾಗಿದೆ, ಇದಕ್ಕಾಗಿ ಬೆಸ್ಕಾಂ ಇಲಾಖೆ ಶೇ.10 ರಷ್ಟು ಹಣ ಕೊಡಬೇಕಾಗಿದ್ದು, ಪುರಸಭೆಯಲ್ಲಿರುವ ಹಣದ ವ್ಯವಹಾರ ಖಜಾನೆ ಮೂಲಕವೇ ನಡೆಯುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಹಣ ಒದಗಿಸಿ ಶಿಥಿಲಾವಸ್ಥೆಯಲ್ಲಿರುವ ಕಂಬ ಹಾಗೂ ಬೀದಿ ದೀಪ ಅಳವಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.