ಬೆಳ್ತಂಗಡಿ: ನಾರಾವಿ ಪರಿಸರದಲ್ಲಿ ಕಳೆದ ಎರಡು ತಿಂಗಳಿನಿಂದ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಯುವಕ ಮಂಡಲದ ಸದಸ್ಯರು ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಕನ್ನಡ ಅಥವಾ ತುಳು ಭಾಷೆಯನ್ನಾಡದೆ ಹಿಂದಿಯಲ್ಲಿ ಮಾತನಾಡುವ ಈತ ತನ್ನ ಊರು ಬಿಹಾರ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಹೆಸರನ್ನು ಕೇಳಿದಾಗ ಒಮ್ಮೆ ಗಿರೀಶ್ ಎಂದು ಇನ್ನೊಮ್ಮೆ ಕೃಷ್ಣ ಎಂದು ಹೇಳುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಪರಿಸರದಲ್ಲಿ ಸುತ್ತಾಡುತ್ತ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಬಳಿ ತೆರಳಿ ಭಿಕ್ಷಾಟನೆ ಮಾಡುತ್ತಾ ತನ್ನ ಜೀವನ ಸಾಗಿಸುತ್ತಿದ್ದ. ನಿಂತಲ್ಲಿ ನೆಲೆ ನಿಲ್ಲದೆ ಸುತ್ತಾಡುತ್ತಿದ್ದ ಈತ ಮಾನಸಿಕ ಅಸ್ವಸ್ಥನಂತೆಯೂ ಕಂಡುಬರುತ್ತಿದ್ದ ಎನ್ನಲಾಗಿದೆ. ವಿಪರೀತ ಗಡ್ಡ ಮತ್ತು ತಲೆ ಕೂದಲು ಬಿಟ್ಟುಕೊಂಡು, ಹರಕು ಮತ್ತು ಕೊಳೆಯಾದ ಬಟ್ಟೆಯನ್ನು ತೊಟ್ಟುಕೊಂಡು ಭಿಕ್ಷಾಟನೆ ಮಾಡುತ್ತಿದ್ದ ಈತನಿಗೆ ನಾರಾವಿ ಸೂರ್ಯನಾರಾಯಣ ಯುವಕ ಮಂಡಲದ ಸದಸ್ಯರು ಮಾನವೀಯತೆ ನೆಲೆಯಲ್ಲಿ ಸಹಕರಿಸಿ ಹೃದಯ ವೈಶಾಲ್ಯತೆ ತೋರಿದ್ದಾರೆ.
ಈತನ ಗಡ್ಡ ಮತ್ತು ಕೂದಲನ್ನು ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರೊಂದಿಗೆ ಮಾತನಾಡಿ, ಆ ಕೇಂದ್ರಕ್ಕೆ ಸೇರಿಸಿದ್ದು, ಆ ಮೂಲಕ ಬೀದಿ ಪಾಲಾಗಿ ಹೋಗುವ ಒಂದು ಜೀವಕ್ಕೆ ಜೀವನ ಕೊಟ್ಟ ಸಂತೃಪ್ತಿ ನಾರಾವಿಯ ಸೂರ್ಯನಾರಾಯಣ ಯುವಕ ಮಂಡಲದ್ದಾಗಿದೆ.