ಮೈಸೂರು: ಆಹಾರ ಅರಸಿ ನಾಡಿಗೆ ಬಂದ ಚಿರತೆ ಸೆರೆಯಾಗಿರುವ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯಲ್ಲಿ ನಡೆದಿದೆ.
ಚಿರತೆಯು ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಬಾಳೆ ಮಂಡಿಗೆ ಪ್ರವೇಶಿಸಿ ಅಲ್ಲಿದ್ದ ನಾಯಿಯನ್ನು ತಿನ್ನಲು ಯತ್ನಿಸಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಮಲಗಿದ್ದ ರಾಮಕೃಷ್ಣಪ್ಪ ಎಂಬುವವರು ಗಾಬರಿಗೊಂಡು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ.
ನಂತರ ಬಾಳೆ ಮಂಡಿಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ನಂತರ ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ.