ಮೈಸೂರು: ದಸರಾ ಮಹೋತ್ಸಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳು ಮೆರುಗು ನೀಡಲಿದ್ದು, ಅ.7ರಿಂದ 13ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ದಸರೆ ಭಾವನಾತ್ಮಕ-ಧಾರ್ಮಿಕತೆಯ ಹಬ್ಬ. ನಾಡಹಬ್ಬ ದಸರೆಯನ್ನು ಸರಳ-ಸಾಂಪ್ರದಾಯಿಕವಾಗಿ ಆಚರಿಸಿದರೂ ಕಲೆ, ಸಂಸ್ಕೃತಿಗೆ ಒತ್ತು ನೀಡಲಾಗಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅರಮನೆ ಮುಂಭಾಗ ಅ.7ರಿಂದ 13ರವರೆಗೆ ಸಂಜೆ 6ರಿಂದ 9.30 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಅ.10ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 24ಗಂಟೆಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾಮಂದಿರದಲ್ಲಿ ಅ.11 ಮತ್ತು 12ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ನಂಜನಗೂಗೆ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಅ.7ರಿಂದ 13ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಕಲಾವಿದರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಆನ್ಲೈನ್ ಮೂಲಕ ವೀಕ್ಷಿಸಬಹುದು ಎಂದು ಹೇಳಿದರು.
2019ರಲ್ಲಿ ದೀಪಾಲಂಕಾರ ಮಾಡಿರುವಂತೆ ಈ ಬಾರಿಯೂ ದೀಪಾಲಂಕಾರ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಕೋರಿಕೊಂಡಿದ್ದರಿಂದ ಹೊಸ ಕಲ್ಪನೆಯೊಂದಿಗೆ 100 ಕಿ.ಮೀ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಈಗಾಗಲೇ ಶೇ.80ರಷ್ಟು ದೀಪಗಳ ಅಳವಡಿಸುವ ಕಾರ್ಯ ಮುಗಿದಿದೆ. 102 ಸರ್ಕಲ್ಗಳನ್ನು ದೀಪಾಲಂಕಾರ ಮಾಡಿ 41 ವಿವಿಧ ಮಾದರಿಯ ಪ್ರತಿಕೃತಿಗಳನ್ನು ಮಾಡಲಾಗುತ್ತಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ, ನೀರಜ್ ಚೋಪ್ರಾ, ಕೃಷ್ಣರಥ, ವಿಧಾನಸೌಧ, ಸಂತಸ್ ಭವನ, ಕೋವಿಡ್-19 ಸೇರಿ ಹಲವಾರು ವೈವಿಧ್ಯಮಯ ಪ್ರತಿಕೃತಿಗಳು ಇರುತ್ತವೆ. ವಿಶೇಷವಾಗಿ ನಗರವನ್ನು ಪ್ರವೇಶಿಸುವ ನಾಲ್ಕು ದ್ವಾರಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಅ.7ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ರಾಜ್ಯಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ಧನ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ.ಯೋಗೀಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅರಮನೆ ಕಾರ್ಯಕ್ರಮಗಳ ವಿವರ
ಸೆ.7ಕ್ಕೆ ಬೆಂಗಳೂರಿನ ಪ್ರಭಾತ್ ತಂಡ ಕರ್ನಾಟಕ ವೈಭ ನೃತ್ಯ ರೂಪಕ ನೀಡಲಿದ್ದು, ಅ.8ರಂದು ಸಂ.6ಕ್ಕೆ ಮಳವಲ್ಲಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಜಾನಪದ ಕಾವ್ಯ ಗಾಯನ ಮಾಡುವರು. ಶಿವಮೊಗ್ಗದ ಹೊಸಹಳ್ಳಿ ವೆಂಕಟರಾಮು ತಂಡ ವಯೋಲಿನ್, ವೈ.ಕೆ.ಮುದ್ದುಕೃಷ್ಣ ತಂಡ ಕನ್ನಡ ಡಿಂಡಿಮ ನೃತ್ಯ ನರ್ತಿಸುವರು. ಅ.9ರಂದು ಎಚ್.ಎನ್.ಭಾಸ್ಕರ್ ತಂಡ ಸಂಗೀತ ದರ್ಬಾರ್ ನಡೆಸಿದರೆ, ಬೆಂಗಳೂರಿನ ಹಂಸಲೇಖ ತಂಡ ದೇಸೀ ಸಂಸ್ಕೃತಿ ಹಬ್ಬ ಕಾರ್ಯಕ್ರಮ ನಡೆಸಿಕೊಡುವರು. ಅ.10ಕ್ಕೆ ಅಮೋಘ ವರ್ಷ ಡ್ರಮ್ಸ್ ಕೆಲಕ್ಟಿವ್ನಿಂದ ಮಿಶ್ರವಾದ್ಯ ಗಾಯನ, ಶಾಂತಲ ವಟ್ಟಂನಿಂದ ನೃತ್ಯರೂಪಕ, ಶಮಿತಾ ಮಲ್ನಾಡ್ ತಂಡದಿಂದ ಮಧುರ ಮಧುರವೀ ಮಂಜುಳಗಾನ ನಡೆಯಲಿದ್ದು, ಅ.11ಕ್ಕೆ ಪೊಲೀಸ್ ಬ್ಯಾಂಡ್, ಶ್ರೇಯಾ ಪ್ರಹ್ಲಾದ್ ಕುಲಕರ್ಣಿರಿಂದ ನೃತ್ಯ ರೂಪಕ, ಶೇಷಗಿರಿದಾಸ್ ತಂಡದಿಂದ ದಾಸವಾಣಿ ಕೀರ್ತನೆಗಳ ಗಾಯನವಿದೆ. ಅ.12ಕ್ಕೆ ಅದಿತಿ ಪ್ರಹ್ಲಾದ್ ಸುಗಮ ಸಂಗೀತ, ಮುದ್ದುಮೋಹನ್ ತಂಡದ ಹಿಂದೂಸ್ತಾನಿ ಸಂಗೀತ, ಪ್ರವೀಣ್ ಗೋಡ್ಬಿಂಡಿ ಮತ್ತು ಷಡಜ್ ಗೋಡ್ಬಿಂಡಿ ತಂಡದ ಕೊಳಲುವಾದನ ಜುಗಲ್ಬಂಧಿ ಕಾರ್ಯಕ್ರಮವಿದೆ. ಅ.13ರಂದು ಪಂಡಿತ್ ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಗಾಯನ, ಬಿ.ಜಯಶ್ರೀ ತಂಡದಿಂದ ರಂಗಗೀತೆ, ಶ್ರೀಧರ್ಜೈನ್ರಿಂದ ನೃತ್ಯರೂಪಕ ನಡೆಯಲಿದೆ.