ಪಾಂಡವಪುರ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ವಿಚಾರವಾಗಿ ಗ್ರಾ.ಪಂ ಸದಸ್ಯೆ ಹಾಗೂ ನಾಲ್ವರು ರೈತ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿರುವ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜು ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ರೈತಸಂಘದ ಕಾರ್ಯಕರ್ತರು ದಿನಪೂರ್ತಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾ.ಪಂ ಕಚೇರಿ ಮುಂದೆ ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ರೈತಸಂಘದ ನೂರಾರು ಕಾರ್ಯಕರ್ತರು, ತಾಲೂಕು ಆಡಳಿತ, ತಹಸೀಲ್ದಾರ್, ಇಒ ಹಾಗೂ ಪಿಡಿಒ ಬಸವರಾಜು ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯೆ ಶಿಲ್ಪ ಹಾಗೂ ಇತರ ಜನ ಸಾಮಾನ್ಯರು ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಧರಣಿ ಮಾಡಿದಕ್ಕೆ ಅವರ ಮೇಲೆ ಟ್ಯಾಂಕ್ ನಿರ್ಮಾಣಕ್ಕೆ ಹಾಕಿದ್ದ ಕಲ್ಲು ಕಿತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಪ್ರಜಾಪ್ರಭುತ್ವದ ಹಕ್ಕನ್ನು ಹತ್ತಿಕ್ಕಿರುವ ಪಿಡಿಓ ಬಸವರಾಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಜತೆಗೆ ರೈತರಲ್ಲಿ ಪಿಡಿಒ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಂಕಷ ತನಿಖೆ ನಡೆಸದೆ ಪಿಡಿಒ ಬಸವರಾಜು ಅವರನ್ನು ತಾಲೂಕು ಪಂಚಾಯಿತಿ ಇಒ ಆರ್.ಪಿ.ಮಹೇಶ್ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಇಒ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶವನ್ನು ಹೊರಹಾಕಿದರು.
ಗ್ರಾ.ಪಂ ಸದಸ್ಯೆ ಶಿಲ್ಪ ಹಾಗೂ ರೈತಸಂಘದ ಮುಖಂಡರಾದ ಲಿಂಗರಾಜು, ಧರ್ಮರಾಜು, ದೇವರಾಜು, ಪ್ರಕಾಶ್ ಅವರುಗಳ ವಿರುದ್ಧ ಸುಳ್ಳು ದೂರು ನೀಡಿರುವ ಪಿಡಿಒ ಬಸವರಾಜು ಸ್ಥಳಕ್ಕೆ ಬರುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಆಗ ಧರಣಿ ಸ್ಥಳಕ್ಕೆ ಧಾವಿಸಿ ರೈತರ ಮನವೊಲಿಸಲು ಯತ್ನಿಸಿದ ಇಒ ಮಹೇಶ್ ಹಾಗೂ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಅವರ ಮಾತಿಗೆ ಮನ್ನಣೆ ನೀಡದ ಪ್ರತಿಭಟನಾಕಾರರು ಪಿಡಿಒ ಸ್ಥಳಕ್ಕೆ ಬಾರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಪಿಡಿಒ ಬಸವರಾಜು ಏಕಾಏಕಿ ಐವರ ವಿರುದ್ಧ ದೂರು ನೀಡಿದ ಕೂಡಲೇ ಯಾವುದೇ ತನಿಖೆ ಕೈಗೊಳ್ಳದೆ, ದೂರು ದಾಖಲಿಸಿ ಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಅವರು, ಹಾಗಾದರೆ ಇಒ ಮಹೇಶ್ ವಿರುದ್ಧವೂ ನಾವು ಕೇಸ್ ನೀಡಿದರೆ ದಾಖಲಿಸುತ್ತೀರಾ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಒಂದು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ಇಒ ಆರ್.ಪಿ.ಮಹೇಶ್ ಅವರೊಬ್ಬ ಅಸಮರ್ಥ ಅಧಿಕಾರಿಯಾಗಿದ್ದು ತಮ್ಮ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸುವ ಯಾವುದೇ ಯೋಗ್ಯತೆ ಇಲ್ಲ ಎಂದು ಇಒ ವಿರುದ್ಧ ಹರಿಹಾಯ್ದರು. ಈ ವೇಳೆ ಇಒ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಳಿಕ ಪ್ರತಿಭಟನಾಕಾರರ ಒತ್ತಾಯಕ್ಕೆ ಇಒ ಬಗ್ಗದ ಕಾರಣ ಶಾಮಿಯಾನ ಹಾಕಿ ಸಂಜೆವರೆಗೂ ರೈತಸಂಘದ ಕಾರ್ಯಕರ್ತರು ಧರಣಿ ಮುಂದುವರೆಸಿದ್ದರು. ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡೇಗೌಡ, ಕೆ.ಎಸ್.ವಿಶ್ವನಾಥ್, ಮೊದಲಿಯಾರ್ ವೆಂಕಟೇಶ್, ಶ್ಯಾದನಹಳ್ಳಿ ಚಲುವರಾಜು, ಮಹದೇವು, ಶಂಭೂನಹಳ್ಳಿ ಕಾಳೇಗೌಡ, ಕ್ಯಾತನಹಳ್ಳಿ ಬೆಟ್ಟೇಗೌಡ, ಡ್ಯಾಮಡಹಳ್ಳಿ ಸ್ವಾಮಿಗೌಡ, ಜಯರಾಂ, ವೈ.ಜಿ.ರಘು, ಮಂಜುನಾಥ್, ಹಿರೇಮರಳಿ ಲೋಹಿತ್, ಕ್ಯಾತನಹಳ್ಳಿ ರವಿಕುಮಾರ್ ಇತರರಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಡಿಆರ್ ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು.