ಕೆ.ಆರ್.ನಗರ: ತಾಲೂಕಿನ ಕೆಗ್ಗೆರೆ ಗ್ರಾಮ ಪಂಚಾಯಿತಿ ಕಳೆದ ಒಂದು ವರ್ಷದಿಂದ ಮಾಡಿರುವ ಅಭಿವೃದ್ದಿ ಕೆಲಸಗಳು ಮತ್ತು ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳಿಂದ ಮಹಾತ್ಮಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಾಜನವಾಗಿದೆ.
ಕೆಗ್ಗೆರೆ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ ಸೇರಿದಂತೆ ನಾರಾಯಣಪುರ, ಕಾಮೇನಹಳ್ಳಿ, ಹೊಸೂರುಕಲ್ಲಹಳ್ಳಿ, ಬೋರೆಕಲ್ಲಹಳ್ಳಿ, ಸೌತನಹಳ್ಳಿ, ಮೂಡಲಕೊಪ್ಪಲು ಗ್ರಾಮಗಳನ್ನು ಒಳಗೊಂಡಿದೆ.
ಶಾಸಕ ಸಾ.ರಾ.ಮಹೇಶ್ ಅವರ ಮಾರ್ಗದರ್ಶನ ಮತ್ತು ಅಧಿಕಾರಿಗಳ ಸಹಕಾರದಿಂದ ಪಂಚಾಯ್ತಿ ವತಿಯಿಂದ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಪ್ರಮುಖವಾಗಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿರುವುದು ಪ್ರಶಸ್ತಿಗೆ ಶಿಪಾರಸ್ಸು ಮಾಡಲು ಪ್ರಮುಖ ಕಾರಣವಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 20-21 ನೇ ಸಾಲಿನಲ್ಲಿ 34 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, 21-22ರಲ್ಲಿ 50 ಲಕ್ಷದ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು ಉದ್ದೇಶಿಸಿರುವುದರ ಜತೆಗೆ ವೈಯುಕ್ತಿಕ ಕಾಮಗಾರಿಗಳಾದ ಸೋಪಿಟ್, ದನದ ಕೊಟ್ಟಿಗೆ ನಿರ್ಮಾಣ, ಕೃಷಿಬದು ಮತ್ತು ಕೃಷಿ ಹೊಂಡಗಳ ನಿರ್ಮಾಣಕ್ಕೂ ಪಂಚಾಯಿತಿ ವತಿಯಿಂದ ಹೆಚ್ಚು ಆದ್ಯತೆ ನೀಡಲಾಗಿದೆ.
ಇದರೊಂದಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ಶಾಸಕ ಸಾ.ರಾ.ಮಹೇಶ್ ಅವರು ವೈಯುಕ್ತಿಕ ಹಣದಲ್ಲಿ ಆರಂಭಿಸಿದ್ದ ಕೋವಿಡ್ ಆಸ್ಪತ್ರೆಗೆ ನಿರಂತರವಾಗಿ ನೀರು ಸರಬರಾಜು ಮಾಡುವುದರೊಂದಿಗೆ ಅಲ್ಲಿನ ಸ್ವಚ್ಛತೆಗೂ ಬೆನ್ನೆಲುಬಾಗಿ ನಿಂತು ತೆರಿಗೆ ವಸೂಲಿ ಮತ್ತು ಕೊರೊನಾ ಜಾಗೃತಿ ಮೂಡಿಸುವಲ್ಲಿಯೂ ಮುಂಚೂಣಿಯಲ್ಲಿ ಇರುವುದು ಶಿಫಾರಸ್ಸಿಗೆ ಪ್ರಮುಖ ಅಂಶವಾಗಿದೆ.
ಚುನಾಯಿತ ಆಡಳಿತ ಮಂಡಳಿಯವರ ಸಮನ್ವಯತೆ ಮತ್ತು ಸಿಬ್ಬಂದಿ ಕಾರ್ಯತತ್ಪರತೆ ಹಾಗೂ ಸಾರ್ವಜನಿಕರ ಸಹಕಾರದಿಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಪೈಕಿ ಕೆಗ್ಗೆರೆ ಗ್ರಾಮ ಪಂಚಾಯ್ತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸಾಗಿದೆ. ಇತರ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ದಿ ಕಾರ್ಯ ಮಾಡಲು ಮಾದರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ.ಮಹೇಶ್ ಅವರು ಕೆಗ್ಗೆರೆ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸಾಗಿರುವುದು ಇತರ ಪಂಚಾಯಿತಿಗಳಿಗೆ ಮಾದರಿಯಾಗಿದ್ದು ಇದಕ್ಕೆ ಕಾರಣರಾದವರಿಗೆ ನಾನು ಅಭಿನಂದಿಸಲಿದ್ದು ಇತರರು ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದ್ದಾರೆ.
ಜಿಪಂ ಸಿಇಓ ಹೆಚ್.ಎಂ.ಯೋಗೀಶ್ ಮಾತನಾಡಿ ಕೆ.ಆರ್.ನಗರ ತಾಲೂಕಿನ ಕೆಗ್ಗೆರೆ ಗ್ರಾಮ ಪಂಚಾಯ್ತಿ ಉತ್ತಮವಾದ ಕೆಲಸ ಮಾಡಿರುವುದರಿಂದ ಅದನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಿದ್ದಕ್ಕೆ ಶುಭ ಹಾರೈಸಿದ್ದಾರೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕೆಗ್ಗೆರೆ ಗ್ರಾಮ ಪಂಚಾಯಿತಿ ಶಿಪಾರಸ್ಸಾಗಿರುವುದು ತುಂಬಾ ಸಂತಸದ ವಿಚಾರವಾಗಿದ್ದು ಇತರರಿಗೆ ಇದು ಸ್ಪೂರ್ತಿಯಾಗಲಿ ಎಂದು, ತಾಪಂ ಇಓ ಹೆಚ್.ಕೆ.ಸತೀಶ್ ಹೇಳಿದರೆ, ಚುನಾಯಿತ ಆಡಳಿತ ಮಂಡಳಿಯವರ ಸಹಕಾರ ಮನೋಭಾವನೆ ಮತ್ತು ಪಂಚಾಯ್ತಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಇದು ಮತ್ತಷ್ಠು ಜನಪರವಾದ ಕೆಲಸ ಮಾಡಲು ನಮಗೆ ಸ್ಪೂರ್ತಿ ನೀಡಲಿದೆ ಎಂದು ಗ್ರಾಪಂ ಅಧ್ಯಕ್ಷರಾದ ಕೆ.ಆರ್.ಶಿಲ್ಪಾಶಾಂತರಾಮ್ ತಿಳಿಸಿದ್ದಾರೆ.
ಎಲ್ಲರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದ್ದು ಮುಂದೆಯೂ ನಾವೆಲ್ಲಾ ಸೇರಿ ಜನರಿಗೆ ಮತ್ತಷ್ಠು ಮೂಲಭೂತ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಉಪಾಧ್ಯಕ್ಷರಾದ ಆರ್.ಸವಿತಾಹರೀಶ್ ಹೇಳಿದ್ದಾರೆ.
ಗ್ರಾಪಂ ಪಿಡಿಓ ಕೆ.ಎಸ್.ಭಾಸ್ಕರ್ ಮಾತನಾಡಿ ಶಾಸಕ ಸಾ.ರಾ.ಮಹೇಶ್ ಅವರ ಮಾಗದರ್ಶನ, ಜಿ.ಪಂ ಹಾಗೂ ತಾ.ಪಂ.ಅಧಿಕಾರಿಗಳ ಸಹಕಾರ ಮತ್ತು ಪಂಚಾಯ್ತಿಯ ಚುನಾಯಿತ ಆಡಳಿತ ಮಂಡಳಿಯವರ ಕಾರ್ಯ ಕ್ಷಮತೆ, ಪಂಚಾಯ್ತಿಯ ಸಿಬ್ಬಂದಿ ವರ್ಗದವರ ಸಹಕಾರದಿಂದ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸಾಗಿದ್ದು ಇದು ಅತ್ಯಂತ ಸಂತಸದ ವಿಚಾರ ಎಂದಿದ್ದಾರೆ.