ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಮೊದಲ ಹಂತವಾಗಿ 46,499 ಮನೆಗಳನ್ನು 5035.35 ಕೋಟಿ ರೂಗಳಿಗೆ ಗುತ್ತಿಗೆ ನೀಡಿ 8 ತಿಂಗಳಿನಲ್ಲಿ ಪೂರ್ಣಗೊಳಿಸಿ ವಸತಿ ರಹಿತರಿಗೆ ನೀಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಭಾರತ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಸರ್ವರಿಗೂ ಸೂರುಯೋಜನೆಯಡಿ ಬೆಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ ಕೈಗೊಳ್ಳಲು ಸರ್ಕಾರ 2017 ರಲ್ಲಿ ಮಂಜೂರಾತಿ ನೀಡಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 1014 ಎಕರೆ 10 ಗುಂಟೆ ಜಮೀನನ್ನು ಮುಫತ್ತಾಗಿ ಗುರುತಿಸಿ ಮಂಜೂರು ಮಾಡಿದೆ. ಈ ಪೈಕಿ 553 ಎಕರೆ 15 ಗುಂಟೆ ಜಮೀನು ರಾಜೀವ್ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಗೊಂಡಿದೆ.
ಮೊದಲನೇ ಹಂತದಲ್ಲಿ ಬರುವ 46,499 (ಜಿ+3 ಇಂದ ಎಸ್+14) ಬಹುಮಹಡಿ ಮನೆಗಳನ್ನು ಮೂಲಭೂತ ಸೌಕರ್ಯದೊಂದಿಗೆ ರೂ. 5035.35 ಕೋಟಿ ವೆಚ್ಚದಲ್ಲಿ ನಿರ್ಮಿಸಲು 10 ಪ್ಯಾಕೇಜ್ಗಳನ್ನು ಗುತ್ತಿಗೆದಾರಿಗೆ ವಹಿಸಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಇವುಗಳಲ್ಲಿ 38,403 ಒಂದು ಬಿಎಚ್ಕೆ ಮನೆಗಳಾದರೆ, 8096 ಎರಡು ಬಿಎಚ್ಕೆ ಮನೆಗಳಾಗಿವೆ. ಗುತ್ತಿಗೆದಾರರು 313 ಎಕರೆಯಲ್ಲಿ 42,988 ಮನೆಗಳ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದರು.
ಸರ್ಕಾರವು 2020ರಲ್ಲಿ ಆದೇಶಿಸಿರುವಂತೆ ಎರಡನೇ ಹಂತದಲ್ಲಿ ಬರುವ 53,501 ಮನೆಗಳನ್ನು (ಜಿ+3) ಮಾದರಿಯಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಿದ್ದು, ಪ್ರತಿ ಮನೆಯ ವೆಚ್ಚ ಎಸ್ಸಿಎಸ್ಟಿ ಕುಟುಂಬಗಳಿಗೆ 5 ಲಕ್ಷ ಹಾಗೂ ಇತರರಿಗೆ 5.50 ಲಕ್ಷ ನಿಗದಿಪಡಿಸಲಾಗಿದೆ. ಖರೀದಿಸುವವರು 1 ಲಕ್ಷ ರೂ ಪಾವತಿಸಿದರೆ, ಮಿಕ್ಕ 4 ಲಕ್ಷ ರೂಗಳನ್ನು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬಹುದು. ಹೊಸದಾಗಿ ಬಹುಮಹಡಿ ಮನೆಗಳ ಬೇಡಿಕೆಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅ.21ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಇಲ್ಲಿಯವರೆಗೆ 20,156 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.