ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಮತ್ತೊಂದು ಬಲಿಯಾಗಿದ್ದು, ಒಂದೇ ದಿನ ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನಪ್ಪಿದ್ದು, ಇದರೊಂದಿಗೆ ಮಳೆ ಸಂಬಂಧಿತ ಅವಘಡದಲ್ಲಿ ಜಿಲ್ಲೆಯಲ್ಲಿ ಸಾವನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಸ್ಟೇ ವೈಯರ್ ಗೆ ವಿದ್ಯುತ್ ಸ್ವರ್ಶಿಸಿ ಬೆಳ್ತಂಗಡಿಯಲ್ಲಿ ಯುವತಿಯೊಬ್ಬಳು ಸಾವನಪ್ಪಿದ್ದಾಳೆ. ಮೃತರನ್ನು ಬೆಳ್ತಂಗಡಿ ತಾ| ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಮನೆಯ ರಸ್ತೆಗೆ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಾಗ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿ ಸಾವನಪ್ಪಿದ್ದಾಳೆ. ಸ್ಟೇ ವೈಯರ್ ಗೆ ವಿದ್ಯುತ್ ಸ್ವರ್ಶಿಸಿ ನೀರಿಗೆ ವಿದ್ಯುತ್ ಪ್ರವಹಿಸಿದ ಕಾರಣ ಈ ದುರ್ಘಟನೆ ನಡೆದಿದೆ.
ಮೃತಪಟ್ಟ ಯುವತಿ ಕೊಕ್ಕಡ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಯುವತಿಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆಗೆ ಸಂಬಂಧಿತ ಅವಘಡದಲ್ಲಿ ಏಳು ಮಂದಿ ಸಾವನಪ್ಪಿದ್ದಾರೆ.