News Karnataka Kannada
Thursday, May 02 2024
ಶಿವಮೊಗ್ಗ

ಶಿವಮೊಗ್ಗ: ಅಮ್ಮನ ನೆನಪಲ್ಲಿ ಮಹತ್ಕಾರ್ಯಕ್ಕೆ ಮುಂದಾದ ರಂಗ ನಿರ್ದೇಶಕ ಕೊಟ್ರಪ್ಪ ಜಿ. ಹಿರೇಮಾಗಡಿ

Theatre director Kotrappa G. Hiremagadi
Photo Credit : By Author

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಬಂಜಾರ ತಾಂಡಗಳಲ್ಲಿ ಎಸ್ಎಸ್ಎಲ್ ಸಿ ಓದುವ ವಿದ್ಯಾರ್ಥಿನಿಯರ ಪೈಕಿ ಅತೀ ಹೆಚ್ಚು ಅಂಕ ಪಡೆಯುವ ಓರ್ವ ವಿದ್ಯಾರ್ಥಿನಿ ಗೆ ಪ್ರತಿ ವರ್ಷ ರೂ. ೧೦ ಸಾವಿರ ನಗದು ಬಹುಮಾನ ನೀಡುವುದಾಗಿ ಶಿವಮೊಗ್ಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಹಾಗೂ ಶಿಕ್ಷಕ ಕೊಟ್ರಪ್ಪ ಜಿ.ಹಿರೇಮಾಗಡಿ ಘೋಷಣೆ ಮಾಡಿದ್ದಾರೆ.

ಪ್ರತಿ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ನಂತರ , ತಾಲೂಕಿನ ಬಂಜಾರ ತಂಡಗಳಲ್ಲಿನ‌ ವಿದ್ಯಾರ್ಥಿಗಳ‌ ಪಟ್ಟಿ ಪಡೆದು ಆ ಮೂಲಕ ತಮ್ಮ ತಂದೆ ಗೋಪ್ಯಾನಾಯ್ಕ್‌ ಮತ್ತು ತಾಯಿ ಕಾಳಿಬಾಯಿ ಅವರ ಹೆಸರಿನಲ್ಲಿ ನಗದು ಬಹುಮಾನ ನೀಡಿ, ವಿದ್ಯಾರ್ಥಿನಿಗೆ ಗೌರವಿಸಲಾಗುವುದೆಂದು ಅವರು ತಮ್ಮ ತಾಯಿ ಕಾಳಿಬಾಯಿ ಅವರ ಮೊದಲ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.

ಕಳೆದ ಗುರುವಾರ ಅವರ ಹುಟ್ಟೂರು ಸೊರಬ ತಾಲೂಕಿನ ಹಿರೇಮಾಗಡಿ ತಾಂಡದಲ್ಲಿ ತಾಯಿ ಕಾಳಿಬಾಯಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ʼಅಮ್ಮ ನಿನ್ನ ನೆನಪುʼ ಶೀರ್ಷಿಕೆಯಡಿ ತುಂಬಾ ವಿಭಿನ್ನವಾಗಿ ಆಯೋಜಿಸಿದ್ದರು. ಪುಣ್ಯ ಸ್ಮರಣೆ ಕಾರ್ಯಕ್ರಮ ಆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ನಡೆಯಿತು.

ಪ್ರಗತಿಪರ ಹೋರಾಟಗಾರರು ಹಾಗೂ ನಿವೃತ್ತ ಶಿಕ್ಷಕರೂ ಆದ ರಾಜಪ್ಪ ಮಾಸ್ತರ್‌, ಜಾನಪದ ನಾಡೋಜ ಪ್ರಶಸ್ತಿ ಪುರಸ್ಕೃತ ಕಲಾವಿದ ಧನುರಾಮ ಲಮಾಣಿ, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಕೆ. ದೇವೇಂದ್ರಪ್ಪ ಹಾಗೂ ಆನವಟ್ಟಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹೆಚ್.ಟಿ. ಕರಿಬಸಪ್ಪ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗುರುವಾರ ಸಂಜೆ ನಡೆದ ತಮ್ಮ ಕಾಳಿಬಾಯಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ʼಅಮ್ಮ ನಿನ್ನ ನೆನಪುʼ ಕಾರ್ಯಕ್ರಮದ ಕುರಿತು ಶಿಕ್ಷಕ ಹಾಗೂ ಶಿವಮೊಗ್ಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ʼ ನನ್ನಮ್ಮ ಇಲ್ಲದೆ ಒಂದು ವರ್ಷ ಕಳೆದು ಹೋಯಿತು. ಅವರಿಲ್ಲದ ಈ ಕ್ಷಣ ತುಂಬಾ ದುಃಖಕರವಾಗಿದೆ. ಅವರಂತೆಯೇ ಬದುಕಿನಲ್ಲಿ ಕಷ್ಟ ನುಂಗಿ, ಮಕ್ಕಳ ಬುದುಕಿಗೆ ಬೆಳಕಾದ ಅಮ್ಮಂದಿರಿಗೆ ಗೌರವ ಸಲ್ಲಿಸಬೇಕೆಂದು ನನ್ನೊಳಗೆ ಅಲೋಚನೆ ಹುಟ್ಟಿಕೊಂಡಾಗ ರೂಪುಗೊಂಡ ಕಾರ್ಯಕ್ರಮವೇ ʼಅಮ್ಮ ನಿನ್ನ ನೆನಪು. ಇದು ಕೇವಲ ನನ್ನಮ್ಮನ ಸ್ಮರಣೆ ಮಾತ್ರವೇ ಅಲ್ಲ. ಅವರಂತೆಯೇ ಮಕ್ಕಳ ಬದುಕಿಗೆ ತಮ್ಮ ಬದುಕನ್ನೇ ತ್ಯಾಗ ಮಾಡಿ ಎಲ್ಲಾ ಅಮ್ಮಂದಿರ ನೆನಪು. ಅದಕ್ಕಾಗಿಯೇ ಇಂಹದೊಂದು ಕಾರ್ಯಕ್ರಮವನ್ನು ಈ ಊರಲ್ಲಿ ಹೀಗೆ ನೆಡಸಬೇಕಾಗಿ ಬಂತು ಎಂದರು.

ಹಾಗೆಯೇ ತನ್ನ ತಾಯಿ ಬಾಲ್ಯದಲ್ಲಿಯೇ ಅಮ್ಮನನ್ನು ಕಳೆದುಕೊಂಡು ಅನಾಥೆಯಾಗಿ ಬೆಳೆದರೂ, ಮಕ್ಕಳನ್ನು ಬಹು ಎತ್ತರಕ್ಕೆ ಬೆಳೆಸುವಲ್ಲಿ ವಹಿಸಿದ ಪಾತ್ರವನ್ನು ನೆನಪಿಸಿಕೊಂಡು ಭಾವುಕರಾದರು. ಆನಂತರ ಕೊಟ್ರಪ್ಪ ಅವರ ತಂದೆ ಗೋಪ್ಯಾನಾಯ್ಕ್‌ ಮತ್ತು ತಾಯಿ ಕಾಳಿಬಾಯಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದ ನಂತರ ಪ್ರಗತಿಪರ ಹೋರಾಟಗಾರರು ಹಾಗೂ ನಿವೃತ್ತ ಶಿಕ್ಷಕರೂ ಆದ ರಾಜಪ್ಪ ಮಾಸ್ತರ್‌ ಮಾತನಾಡಿ, ಅಮ್ಮನ ಮೊದಲ ವರ್ಷದ ಸ್ಮರಣೆಯನ್ನು ಕೊಟ್ರಪ್ಪ ತುಂಬಾ ವಿಭಿನ್ನವಾಗಿ ಆಯೋಜಿಸಿರುವುದುವಿಶೇಷವಾಗಿದೆ.

ಹಾಗೆಯೇ ಹೆಮ್ಮೆ ಎನಿಸುತ್ತದೆ. ಯಾಕಂದ್ರೆ ತನ್ನಂತೆಯೇ ಕಷ್ಟದೊಳಗೆ ಬದುಕಿ, ಮಕ್ಕಳಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಎಲ್ಲಾ ಅಮ್ಮಂದಿರ ಗೌರವಪೂರ್ವಕವಾಗಿ ಈ ಕಾರ್ಯಕ್ರಮವನ್ನು ಅವರು ಮೀಸಲಿಟ್ಟು, ಅದನ್ನೊಂದು ಜಾಗೃತಿ ಕಾರ್ಯಕ್ರಮವನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ ಎಂದರು.

ಕೂಡು ಕುಟುಂಬಗಳು ಜಟಿಲವಾಗಿ, ಒಡೆದು ಛಿದ್ರವಾಗಿ, ಹಿರಿಯರು ಅನಾಥವಾಗುತ್ತಿರುವ ಈ ಸಂದರ್ಭದಲ್ಲಿ ಅವರ ಮಹತ್ವವನ್ನು, ತ್ಯಾಗವನ್ನು ತಿಳಿಸುವ ಇಂತಹ ಕಾರ್ಯಕ್ರಮಗಳು ಎಲ್ಲಾ ಹಳ್ಳಿಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ದೇಶಾದ್ರಿ ಹೊಸ್ಮನೆ, ಉಪನ್ಯಾಸಕ ಉಮೇಶ್‌ , ರಷಿದ್‌ ಸೊರಬ, ಹಂಚಿ ಗಂಗಣ್ಣ, ವಾಚಾನಾಯ್ಕ್‌ , ದೇವಜೀ ಸೇರಿದಂತೆ ಹಲವರು ಹಾಜರಿದ್ದರು. ಶಿವಮೊಗ್ಗದ ರಂಗ ಬೆಳೆಕು ತಂಡವು ಅಮ್ಮನ ಮಹತ್ವ ಸಾರುವ ರಂಗ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮವೂ ಎಲ್ಲರ ಮನ ಮುಟ್ಟುವಂತೆ ಮಾಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು