ಚಿಕ್ಕಮಗಳೂರು: ಕರ್ನಾಟಕಕ್ಕೆ ೨೦೨೪ರ ಮೊದಲ ಮಳೆಯು ಮಾರ್ಚ್ ತಿಂಗಳಲ್ಲೇ ಸುರಿದಿದೆ. ರಾಜ್ಯದ ಘಟ್ಟ ಪ್ರದೇಶಗಳಾದ ಹಾಗೂ ಹಲವು ನದಿಗಳ ಉಗಮ ಸ್ಥಾನಗಳೂ ಆಗಿರುವ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆಯಾಗಿದೆ. ಇದರಿಂದ ಕಾದು ಕೆಂಡದಂತಾಗುತ್ತಿದ್ದ ಭೂಮಿ ತಂಪಾಗಿದ್ದು, ಕೆಲವು ಹಳ್ಳ ಕೊಳ್ಳಗಳು ಕೂಡ ತುಂಬಿ ಹರಿದಿವೆ.
ಕಳೆದೊಂದು ವಾರದಿಂದಲೂ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಸಿಕ್ಕಿತ್ತು. ಆದರೆ, ಬೆಂಗಳೂರು ಹಾಗೂ ಇತರೆ ದಕ್ಷಿಣ ಒಳನಾಡಿದ ಪ್ರದೇಶಗಳಲ್ಲಿ ಆಗಾಗ ಮೋಡ ಕವಿಯುತ್ತಿದ್ದರೂ ಮಳೆಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ, ಘಟ್ಟ ಪ್ರದೇಶಗಳಾದ ಕಾಫಿನಾಡು ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಿನ್ನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆಲವು ಸ್ಥಳಗಳಲ್ಲಿ ಸುಮಾರು ೧೦ ರಿಂದ ೩೦ ನಿಮಿಷಗಳ ಕಾಲ ಮಳೆಯಾಗಿದೆ. ಜೊತೆಗೆ, ಇಂದು ಮಧ್ಯಾಹ್ನ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ, ಕೊಳಗಾವೆ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ೧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಕಾಫಿನಾಡಿಗೆ ತಂಪೆರೆದ ವರುಣ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ೨೦೨೪ನೇ ಸಾಲಿನ ವರ್ಷದ ಮೊದಲ ಮಳೆ ನಿರ್ಮಾಣವಾಗಿದೆ. ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದ ವರುಣದೇವ ತಂಪಿನ ಸಿಂಚನ ನೀಡಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಇನ್ನು ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆ ಕಂಡು ಹಳ್ಳಿಗರು ಹಾಗೂ ಕೃಷಿಕರು ಸಂತಸಕ್ಕೀಡಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕೊಳಗಾವೆ, ಮೇಲಿನ ಹುಲುವತ್ತಿ ಗ್ರಾಮದಲ್ಲಿ ಹಾಗೂ ಮುತ್ತೋಡಿ ಹೋಬಳಿಯ ಅರಣ್ಯ ಪ್ರದೇಶಗಳ ಗ್ರಾಮದಲ್ಲಿ ಭಾರಿ ಮಳೆಯಾಗಿದೆ.
ಒಟ್ಟು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ೨೦-೩೦-೪೦ ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಅಡಿಕೆ-ಕಾಫಿ-ಮೆಣಸು ಉಳಿಕೊಳ್ಳಲು ಪರದಾಡ್ತಿದ್ದ ಬೆಳೆಗಾರರಿಗೆ ಈ ಮಳೆಯು ಭಾರಿ ಅನುಕೂಲ ಮಾಡಿಕೊಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಸಮೀಪದ ಗ್ರಾಮಗಳಲ್ಲಿನ ಸಣ್ಣ ಹಳ್ಳಗಳು ಕೂಡ ತುಂಬಿ ಹರಿದಿವೆ.