ಚಿಕ್ಕಮಗಳೂರು: ಮುಂದಿನ ೨೦೨೮ ರ ಚುನಾವಣೆಗೆ ಜೆಡಿಎಸ್ನಲ್ಲಿ ಯುವ ನಾಯಕರುಗಳನ್ನು ತಯಾರು ಮಾಡುತ್ತೇವೆ. ನಾಡಿನ ರೈತರ ಆರ್ಥಿಕ ಪರಿಸ್ಥಿತಿ ಸರಿಪಡಿಸುವ, ರೈತರ ಧ್ವನಿಯಾಗುವ ನಾಯಕತ್ವ ಬೆಳೆಸುವ ತಯಾರಿ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಇಂದು ಕ್ಷೇತ್ರದ ದೇವನೂರು ಗ್ರಾಮದಲ್ಲಿ ಪಂಚರತ್ನ ರಥ ಯಾತ್ರೆಯಲ್ಲಿ ಭಾಗವಹಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ಈ ಬಾರಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ದಿವಂಗತ ಎಸ್.ಎಲ್.ಧರ್ಮೇಗೌಡ ಅವರ ಪುತ್ರ ಸೋನಾಲ್ಗೌಡ ಅವರಿಗೆ ಟಿಕೆಟ್ ಕೊಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೀಗ ೬೪ ವರ್ಷವಾಗಿದೆ. ಮುಂದಿನ ೨೦೨೮ರ ಚುನಾವಣೆ ವೇಳೆಗೆ ೬೯ ಆಗುತ್ತದೆ. ರಾಜಕಾರಣದಿಂದ ನಾವು ಹಿಂದೆ ಸರಿಯುವ ದಿನ ಪ್ರಾರಂಭವಾಗಬಹುದು. ಈ ಕಾರಣಕ್ಕೆ ಸೋನಲ್ಗೌಡ, ನಿಕಿಲ್ ಎಲ್ಲರೂ ಮುಂದಿನ ಪೀಳಿಗೆಗೆ ನಾಯಕರಾಗಬೇಕಿದೆ ಎಂದು ತಿಳಿಸಿದರು.
ಮಾಜಿ ಶಾಸಕ ದಿವಂಗತ ಎಸ್. ಆರ್.ಲಕ್ಷ್ಮಯ್ಯ ಅವರು ದೇವೇಗೌಡ ಆಪ್ತರಾಗಿದ್ದರು, ಮತ್ತು ಅವರ ಮಕ್ಕಳಾದ ಎಸ್.ಎಲ್.ಧರ್ಮೇಗೌಡ, ಬೋಜೇಗೌಡ ಅವರ ಪಕ್ಷ ನಿಷ್ಠೆಯನ್ನೂ ನಾವು ಮರೆತಿಲ್ಲ. ಈ ಬಾರಿ ನಮ್ಮ ಸರ್ಕಾರ ಬಂದರೆ ಬೊಜೇಗೌಡ ಅವರನ್ನು ಸಚಿವರನ್ನಾಗಿ ಮಾಡಿ ಲಕ್ಷ್ಮಯ್ಯ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದರು.
ಹಾಸನ ಕ್ಷೇತ್ರದ ಟಿಕೆಟ್ ವಿಚಾರವನ್ನು ದೇವೇಗೌಡರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಅಲ್ಲಿನ ಇಂಚಿಂಚೂ ವಿಚಾರ ಗೌಡರಿಗೆ ಗೊತ್ತಿದೆ. ಯಾವುದೇ ಗಲಭೆ, ಗೊಂದಲಕ್ಕೆ ಅವಕಾಶವಿಲ್ಲದೆ ಅವರ ಸಲಹೆ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ನಿನ್ನೆ ಬೆಳಗವಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಜಲಿಂ ಗಪ್ಪ, ವೀರೇಂದ್ರ ಪಾಟೀಲ್, ಮಲ್ಲಿ ಕಾರ್ಜುನ ಖರ್ಗೆ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಅವರು ಇನ್ನೂ ನಮ್ಮ ಪಕ್ಷಕ್ಕೆ ಅವಶ್ಯ ಎನ್ನುತ್ತಾರೆ. ಸಿಎಂ ಆಗಿದ್ದಾಗ ಅವರನ್ನು ಹೇಗೆಲ್ಲಾ ನಡೆಸಿಕೊಂಡು ಈಗ ಏಕೆ ಆತ್ಮೀಯತೆ. ಚುನಾವಣೆ ನಂತರ ಯಡಿಯೂರಪ್ಪ ಏನು ಎನ್ನುವುದನ್ನು ಹೇಳಿ ಎಂದರು.
೭ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಕಾರಿ ನೌಕರರು ಕೈಗೊಂಡಿರುವ ಮುಷ್ಕರಕ್ಕೆ ಬಿಜೆಪಿ ಸರ್ಕಾರದ ಸ್ವಯಂಕೃತ ಅಪ ರಾಧವೇ ಕಾರಣ. ಹಿಂದೆ ಸರ್ಕಾರಿ ನೌಕರರ ಸಮಾವೇಶದಲ್ಲಿ ೭ ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರುವುದಾಗಿ ಹೇಳಿ ಸಿಹಿ ತಿಂದು ಸನ್ಮಾನ ಮಾಡಿಸಿಕೊಂಡು ಈಗ ಬಜೆಟ್ನಲ್ಲಿ ಘೋಷಿಸಿದ್ದೇವೆ ಎಂದು ಹೇಳುತ್ತಾ ಅದಕ್ಕೆ ಸ್ಪಷ್ಟತೆಯ ನ್ನು ತೋರಿಸದಿರುವುದು ನೌಕರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಪಕ್ಷದ ಘೋಷಿತ ಅಭ್ಯರ್ಥಿ ಬಿ.ಎಂ.ತಿಮ್ಮ ಶೆಟ್ಟಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.