ಕಡೂರು: ಜನರ ಬದುಕನ್ನು ಕಟ್ಟಿಕೊಡುವುದಕ್ಕಾಗಿ ಈ ಬಾರಿ ಸ್ವತಂತ್ರವಾಗಿ ಆಡಳಿತ ನಡೆಸಲು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಪಂಚ ರತ್ನ ಯೋಜನೆಗಳ ಸಂಪೂರ್ಣ ಅನುಷ್ಟಾನಗೊಳಿಸಲು ಜನತೆ ಜೆಡಿಎಸ್ಗೆ ಸಂಪೂರ್ಣ ಆಶೀರ್ವಾದ ನೀಡಬೇಕಿದೆ. ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೆ ೨೦೨೮ರೊಳಗೆ ಪಂಚರತ್ನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗುವುದು. ಯೋಜನೆಗಳನ್ನು ಅನುಷ್ಠಾನಗೊಳ್ಳದಿದ್ದಲ್ಲಿ ಜೆಡಿಎಸ್ ಪಕ್ಷವನ್ನು ವಿಸರ್ಜಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣ ದಲ್ಲಿ ಶನಿವಾರ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಹಾವಳಿಯಿಂದ ರಾಜ್ಯದ ಗ್ರಾಮೀಣ ಜನರ ಬದುಕು ದುಸ್ತರ ವಾಗಿದೆ. ಸಾಲಸೂಲ ಮಾಡಿಕೊಂಡೇ ಬದುಕು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ವೈದ್ಯಕೀಯ ಸೌಲಭ್ಯ ಮತ್ತು ಗ್ರಾಮೀಣ ಜನತೆಯ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಲೆ ದೊರೆಯಬೇಕು. ಯುವಕರು ಸ್ವಾವಲಂಬಿಯಾಗಬೇಕು. ರಾಜ್ಯದ ಶ್ರಮಿಕ ಜೀವಿಗಳ ಬದುಕು ನೆಮ್ಮದಿಯುತವಾಗಿರಬೇಕೆಂಬ ಚಿಂತನೆಯ ಫಲವೇ ಪಂಚರತ್ನ ಯೋಜನೆ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಶಕ್ತಿಯನ್ನು ಜನತೆ ನೀಡಿದರೆ ಈ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನ ಮಾಡಲಾಗುತ್ತದೆ ಎಂದರು.
ಈ ಎಲ್ಲ ಯೋಜನೆಗಳಿಗೆ ಹಣವನ್ನು ಎಲ್ಲಿಂದ ಒದಗಿಸಲಾಗುತ್ತದೆ ಎಂಬ ಪ್ರಶ್ನೆಗೆ ಇದಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಣೆಗೆ ನಾನು ದರೋಡೆ ಮಾಡಬೇಕಿಲ್ಲ. ಕಳ್ಳತನ ಮಾಡುವುದಿಲ್ಲ. ರಾಜ್ಯದ ಜನತೆಯ ಹಣದಿಂದಲೇ ಪಂಚರತ್ನದ ಯೋಜನೆಗಳನ್ನು ಸಾಕಾರಗೊಳಿಸುತ್ತೇನೆ. ರಾಷ್ಟ್ರೀಯ ಪಕ್ಷಗಳನ್ನು ಟೀಕಿಸುವ ಬದಲು ನಮ್ಮ ಯೋಜನೆಗಳು ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಕೈಗೊಂಡಿರುವ ಸಾಧನೆಗಳೇ ಹೆಚ್ಚಿವೆ. ಈಗಾಗಲೇ ರಾಜ್ಯಾದ್ಯಂತ ಪಂಚರತ್ನ ಯಾತ್ರೆಗೆ ಅಭೂತಪೂ ರ್ವ ಬೆಂಬಲ ವ್ಯಕ್ತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಯಾತ್ರೆಗಳಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿಯಾಗಿವೆ ಎಂದರು.
ಭಧ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ನೀಡಿದ್ದು ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈಗ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ನೀಡುವುದಾಗಿ ಹೇಳಿ ರುವುದು ಕೇವಲ ಚುನಾವಣೆಯ ಘೋಷಣೆ ಮಾತ್ರವಾಗಿದ್ದು, ಇದನ್ನು ಯಾರು ನಂಬವ ಸ್ಥಿತಿಯಲ್ಲಿ ಇಲ್ಲ. ಅದನ್ನು ಇನ್ನೂ ಕೊಟ್ಟಿಲ್ಲ. ಕೊಡುವುದೂ ಇಲ್ಲ. ಅವರ ಸುಳ್ಳುಗಳನ್ನು ಜನರು ನಂಬಬಾರದು ಎಂದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮೋದಿಯವರು, ಬಿಜೆಪಿಯವರು ಸುಳ್ಳು ಹೇಳಿ ಜನರನ್ನು ಭ್ರಮೆಗೆ ನೂಕುತ್ತಿದ್ದಾರೆ. ಆದರೆ ಜನರ ಬದುಕು ಇಂದು ಏನಾಗಿದೆ ಎಂಬುದನ್ನು ಗಮನಿಸಬೇಕಿದೆ. ಕಾಂಗ್ರೆಸ್ ನವರು ಕುಟುಂಬದಲ್ಲಿ ಒಡಕು ಬರುವಂತಹ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಜೆಡಿಎಸ್ ಜನ ಕಲ್ಯಾಣದ ಚಿಂತನೆಗಳನ್ನಷ್ಟೆ ಹೇಳುತ್ತಿದೆ. ಬೊಮ್ಮಾಯಿ ಮತ್ತು ಅಮಿತ್ ಷಾ ನಮ್ಮ ನಾಡಿನ ಹೆಮ್ಮೆಯ ನಂದಿನಿ ಹಾಲು ಒಕ್ಕೂಟವನ್ನು ಗುಜರಾತಿಗೆ ಮಾರಾಟ ಮಾಡುವ ದುಸ್ಸಾಹಸಕ್ಕೆ ಕೈಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಅದು ಫಲಿಸದು. ಹಾಗೇನಾದರೂ ಮಾಡಿದರೆ ಇಲ್ಲಿ ಹಾಲಿನ ಕ್ರಾಂತಿಯ ಬದಲು ರಕ್ತಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಬಿಜೆಪಿಯವರ ನಿಜಬಣ್ಣ ಬಯಲಾಗಿದೆ. ಕಾಂಗ್ರೆಸ್ಸಿನವರು ಎಲ್ಲೆ ಹೋದರೂ ಖಾಲಿ ಖುರ್ಚಿಗಳೇ ಕಾಣಿಸುತ್ತವೆ. ಆದರೆ ಕುಮಾರಸ್ವಾಮಿ ಎಲ್ಲಿಯೇ ಹೋದರೂ ಜನಬೆಂಬಲ ದೊರೆಯುತ್ತಿದೆ. ಕಡೂರು ಕ್ಷೇತ್ರಕ್ಕೂ ನಮಗೂ ಅವಿನಾಭಾವ ಸಂಬಂಧವಿದೆ. ಎಪ್ಪತ್ತು ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ್ದೇವೆ. ಮುಸಲ್ಮಾನ ಜನಾಂಗದವರಿಗೆ ಮಸೀದಿಗಳಿಗೆ ಐದು ಕೋಟಿ ಅನುದಾನ ಒದಗಿಸಲಾಯಿತು. ಭಧ್ರಾ ಮೇಲ್ದಂಡೆ ಯೋಜನೆಯಲ್ಲಿ ೩೦ ಕೋಟಿ ರೂ. ಅನುದಾನ ಒದಗಿಸಿರುವುದು ದೇವೇಗೌಡರ ಶ್ರಮ ಹೆಚ್ಚಿನದ್ದು ಎಂದರು.
ಜೆಡಿಎಸ್ ಅಭ್ಯರ್ಥಿ ಸಿ.ಎಂ. ಧನಂಜಯ್ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗೆ ದೂರದೃಷ್ಟಿಯನ್ನು ಹೊಂದಿದ್ದು, ಪಂಚರತ್ನ ಯೋಜನೆಗ ಳನ್ನು ಸಾಕಾರಗೊಳಿಸಲು ಕುಮಾರ ಣ್ಣನ ಸರ್ಕಾರ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಯುವ ಜನತೆಗೆ ಉದ್ಯೋಗ ದೊರಕಿಸಲು ಕೈಗಾರಿಕಾ ವಲಯಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವ ಗುರಿಹೊಂ ದಲಾಗಿದೆ. ಕ್ಷೇತ್ರದ ಜನತೆಯ ಬೆಂ ಬಲ ನನಗೆ ಶಕ್ತಿಯಾಗಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಪುರಸಭಾ ಸದಸ್ಯ ಮರುಗುದ್ದಿ ಮನು, ಹಾಸನ ಹಾಲುಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಮುಖಂಡರಾದ ಸಿ. ಎಚ್. ಪ್ರೇಮ್ಕುಮಾರ್, ಬಿ.ಟಿ. ಗಂಗಾಧರ ನಾಯ್ಕ, ಬಿ.ಪಿ.ನಾಗ ರಾಜ್, ಅಬೀಬುಲ್ಲಾ ಖಾನ್, ಪ್ರಭಾ ವತಿ, ಎಸ್.ಡಿ.ಕೊಪ್ಪಲು ಅಜ್ಜಯ್ಯ ಮತ್ತಿತರರಿದ್ದರು.