ಚಿಕ್ಕಮಗಳೂರು: ಮೈಸೂರಿನಲ್ಲಿ ಯತೀಂದ್ರ ತಂದೆ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದ ವಿಡಿಯೋ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರವನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ್ದ 5 ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಯತೀಂದ್ರ ಮತ್ತು ಕೆಜೆ ಜಾರ್ಜ್ ವಿರುದ್ಧ ವ್ಯಂಗ್ಯ ಪೋಸ್ಟರ್ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ, ಶಶಿ ಅಲ್ದೂರು, ಸೇರಿದಂತೆ ಐವರ ವಿರುದ್ಧ ಎಫ್ಐಆರ್ ಹಾಕಲಾಗಿದೆ. ತಾಲೂಕು ಕಚೇರಿ, ಕೆಇಬಿ ಕಚೇರಿ ಸೇರಿದಂತೆ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಪೋಸ್ಟರ್ ಅಂಟಿಸಿದ್ದರು.
ಪೋಸ್ಟರ್ನಲ್ಲಿ ವೈಎಸ್ಟಿ ಸಂಗ್ರಹ ಸಮಿತಿಯ ಸುತ್ತೋಲೆ ಎಂದು ಬರೆದು ಲೇವಡಿ ಮಾಡಿರುವ ಬಿಜೆಪಿ ‘ಹಲೋ ಅಪ್ಪಾ, ಆ್ಯಪ್ ಡೌನ್ಲೋಡ್ ಮಾಡಿ ಪೇಮೆಂಟ್ ಮಾಡಿ ಅಂತ ಟೀಕಿಸಿದೆ. ಕಾಂಗ್ರೆಸ್ನಿಂದ ಹಗಲು ದರೋಡೆ ಅಂತ ಸಿಕ್ಕ ಸಿಕ್ಕ ಕಡೆಗಳೆಲ್ಲಾ ಅಂಟಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪೋಸ್ಟರ್ ತೆರವು ಮಾಡಿದ್ದಾರೆ.