ಚಿಕ್ಕಮಗಳೂರು: ಕನಿಷ್ಠ ವೇತನ, ಪಿಂಚಣಿ, ಪಿಎಫ್, ಇಎಸ್ಐ ಮತ್ತಿತರೆ ಸೌಲಭ್ಯಕ್ಕೆ ಆಗ್ರಹಿಸಿ ಫೆ.೧೫ ರಂದು ಬಿಸಿಯೂಟ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಅಕ್ಷರ ದಾಸೋಹ, ಬಿಸಿಯೂಟ ಕಾರ್ಯಕರ್ತೆಯರ ಫೆಡರೇಶನ್ ಎಚ್ಚರಿಸಿದೆ.
ಎಐಟಿಯುಸಿ ಪ್ರಧಾನ ಕಾರ್ಯ ದರ್ಶಿ ಎಸ್.ವಿಜಯ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ೧.೨೦ ಲಕ್ಷ ಶಾಲಾಮಕ್ಕಳಿಗೆ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಕೇವಲ ೩ ಸಾವಿರ ರೂ. ಚಿಕ್ಕಾಸು ನೀಡಿ ಸರಕಾರ ದುಡಿಸಿಕೊಳ್ಳುತ್ತಿದೆ. ೬೦ ವರ್ಷ ತುಂಬಿದ ಕಾರ್ಯಕರ್ತ ರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕ ಲಾಗುತ್ತಿದೆ. ಅವರಿಗೆ ನಿವೃತ್ತಿ ಉಪಧನವಾಗಲಿ, ಪಿಂಚಣಿ ವ್ಯವಸ್ಥೆ ಇಲ್ಲದೆ ಬೀದಿಗೆ ಬೀಳುವ ಸ್ಥಿತಿ ತಲುಪಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರಿಗೆ ಪಿಎಫ್, ಇಎಸ್ಐ, ಉದ್ಯೋಗ ಭದ್ರತೆ ನೀಡಬೇಕು ಎಂಬುದು ನಮ್ಮ ಪ್ರಬಲ ಬೇಡಿಕೆಯಾಗಿದೆ ಎಂದರು.
ಕೇಂದ್ರ ಸರಕಾರ ನಿಯಮಾನು ಸಾರ ನೀಡಬೇಕಾದ ತನ್ನ ಪಾಲಿನ ಶೇ.೬೦ರಷ್ಟು ವೇತನವನ್ನು ಸುಮಾರು ೧೨ ವರ್ಷದಿಂದ ನೀಡಿಲ್ಲ. ಕಾರ್ಯಕರ್ತೆಯರಿಗೆ ವಿನಾ ಕಾರಣ ತೊಂದರೆ ನೀಡಲಾಗುತ್ತಿದೆ. ಅವರಿಗೆ ಕನಿಷ್ಠ ವೇತನ ನೀಡಿ ಪಿಂಚಣಿ ವ್ಯವಸ್ಥೆ ಅಡಿ ತರಬೇಕು, ವೇತನ ಹೆಚ್ಚಳ ಮತ್ತಿತರೆ ಬೇಡಿಕೆ ಮುಂದಿಟ್ಟು ಬೆಂಗಳೂರಿನಲ್ಲಿ ಬಿಸಿಯೂಟ ಕಾರ್ಯರ್ತರು ಫೆ.೧೫ ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಅದರ ಭಾಗವಾಗಿ ನಾವು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಫೆಡರೇಶನ್ ಅಧ್ಯಕ್ಷ ಜಿ.ರಘು ಮಾತನಾಡಿ ಬಿಸಿಯೂಟ ಕಾರ್ಯಕರ್ತರ ಪರ ನಿಲ್ಲದ ಕೇಂದ್ರ ,ರಾಜ್ಯ ಸರಕಾರದ ಜತೆಗೆ ವಿರೋಧ ಪಕ್ಷಗಳ ನಡೆಯನ್ನು ನಾವು ಖಂಡಿಸುತ್ತೇವೆ ಎಂದರು. ಬಿಸಿಯೂಟ ಕಾರ್ಯಕರ್ತರಾದ ಪುಷ್ಪಾವತಿ. ಲತಾ, ಪ್ರೇಮ, ಸುಜಯ, ಸ್ವಾತಿ, ಲಕ್ಷ್ಮಿ , ಇಂಧುಮತಿ, ಮತ್ತಿತರರಿದ್ದರು.