ಉಡುಪಿ: ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ಲೇಖಕ ಮತ್ತು ಸಾಹಿತಿ ರೋಹಿತ್ ಚಕ್ರತೀರ್ಥ ಅವರನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನಗಳಿಗೆ ಕರೆಯುವುದು ತಪ್ಪಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸಮರ್ಥಿಸಿಕೊಂಡರು.
ರೋಹಿತ್ ಚಕ್ರತೀರ್ಥರನ್ನು ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿರುವುದಕ್ಕೆ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಬುಧವಾರ ಉಡುಪಿ ಎಂಜಿಎಂ ಮೈದಾನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಎಲ್ಲದರಲ್ಲೂ ತಪ್ಪು ಹುಡುಕುವುದು, ವಿಕೃತಿಗಳನ್ನು ಯೋಚಿಸುವುದು ಸರಿಯಲ್ಲ. ರಾಷ್ಟ್ರೀಯ ವಿಚಾರಗಳನ್ನು ಬರೆಯುವ ವ್ಯಕ್ತಿಯನ್ನು ಆಹ್ವಾನಿಸಿದ್ದೇವೆ. ನಮ್ಮ ಸರಕಾರ ರಾಷ್ಟ್ರೀಯ ವಿಚಾರಗಳನ್ನು ಬೆಂಬಲಿಸುತ್ತದೆ. ಈ ವಿಚಾರದಡಿಯಲ್ಲಿ ಕೆಲಸ ಮಾಡುವ ಪಾರ್ಟಿ ನಮ್ಮದು. ರೋಹಿತ್ ಚಕ್ರತೀರ್ಥ ಮಾತ್ರವಲ್ಲ, ಇಂತಹ ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ಇನ್ನು ಹತ್ತು ಜನರನ್ನು ಕರೆಯುತ್ತೇವೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.