ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮಿಷನ್ ೧೨೩ ಟಾರ್ಗೆಟ್ ಹಾಕಿಕೊಂಡಿರುವ ದಳಪತಿ ಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತ , ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹೌದು, ಹೆಚ್. ಡಿ ಕುಮಾರಸ್ವಾಮಿ ಆಪ್ತ, ಜೆಡಿಎಸ್ ಮುಖಂಡ ಎಸ್ ಎಲ್ ಭೋಜೇಗೌಡ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಕಣದಲ್ಲಿದ್ದರೂ ಭೊಜೇಗೌಡ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಸೂಚಿಸಿದ್ದಾರೆ.
ಅದೆಲ್ಲಾ ಗೊತ್ತಿಲ್ಲ ನೀವೆಲ್ಲಾ ಸೇರಿ ಕಾಂಗ್ರೆಸ್ ಗೆ ವೋಟ್ ಹಾಕಬೇಕು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ವೋಟ್ ಹಾಕಿ ಗೆಲ್ಲಿಸಿ, ಮಿಕ್ಕಿದ್ದು ಅಮೇಲೆ ನೋಡಿಕೊಳ್ಳೋಣ ಎಂದು ಭೋಜೇಗೌಡ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯನಿಗೆ ಮತ ಹಾಕುವಂತೆ ಜೆಡಿಎಸ್ ಮುಖಂಡ ತನ್ನ ಕಾರ್ಯ ಕರ್ತರಿಗೆ ಕರೆ ನೀಡಿದ್ದಾರೆ. ಬೋಜೇಗೌಡ ಕಾರ್ಯಕರ್ತರ ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಶಾಸಕ ಸಿ.ಟಿ. ರವಿ ಸೋಲಿಸಲು ಕಾಂಗ್ರೆಸ್, ಜೆಡಿಎಸ್ ಒಂದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಪ್ರಸಿದ್ದ ಪಡೆದಿರುವ ಸಿ ಟಿ ರವಿ ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದಾಗಿ, ಸಿ ಟಿ ರವಿ ಸೋಲಿಸಲು ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.