ಚಿಕ್ಕಮಗಳೂರು: ಕೇರಳ ಪೊಲೀಸರಿಗೆ ಸೆರೆ ಸಿಕ್ಕಿರುವ ನಕ್ಸಲ್ ಮುಖಂಡ ಶೃಂಗೇರಿ ತಾಲ್ಲೂಕು ಬುಕ್ಕಡಿ ಬೈಲಿನ ಬಿ.ಜಿ.ಕೃಷ್ಣಮೂರ್ತಿ ಮತ್ತು ಪಾರ್ವತಿ ಇಬ್ಬರನ್ನೂ ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಬ್ಬರೂ ನಕ್ಸಲರನ್ನು ಕೇರಳ ಪೊಲೀಸರು ಅಲ್ಲಿನ ವಯನಾಡು ಜಿಲ್ಲೆಯಲ್ಲಿ ಬಂಧಿಸಿರುವುದು ನಿಜ. ಈ ಬಗ್ಗೆ ನಮಗೂ ಮಾಹಿತಿ ಬಂದಿದೆ ಎಂದರು.
ಬಿ.ಜಿ.ಕೃಷ್ಣ ಮೂರ್ತಿ ವಿರುದ್ಧ ನಮ್ಮ ಜಿಲ್ಲೆಯಲ್ಲಿ ಸುಮಾರು ೩೦ ಪ್ರಕರಣಗಳು. ಹಾಗೂ ಸಾವಿತ್ರಿ ವಿರುದ್ಧ ಐದಾರು ಪ್ರಕರಣಗಳಿವೆ. ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ಮಾರ್ಗದರ್ಶನ ಪಡೆದು ಕೇರಳ ರಾಜ್ಯದೊಂದಿಗೆ ನಾವು ಹೊಂದಾಣಿಕೆ ಮಾಡಿ ಅವರಿಬ್ಬರನ್ನೂ ವಶಕ್ಕೆ ಪಡೆಯುವ ಪ್ರಕ್ರಿಯೆ ಮುಂದುವರಿಸುತ್ತೇವೆ. ನಂತರ ನಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತನಿಖೆ ಮುಂದುವರಿಸುತ್ತೇವೆ ಎಂದರು.
ನಕ್ಸಲರ ಶರಣಾಗತಿ ಸಂಬಂಧಿ ನಮ್ಮ ಬಳಿ ಯಾರೂ ಬಂದು ಮಾತನಾಡಿಲ್ಲ. ನಮ್ಮ ಜಿಲ್ಲೆಯ ಶ್ರೀಮತಿ, ಮುಂಡಗಾರು ಲತಾ, ಜ್ಯೋತಿ ಅಲಿಯಾಸ್ ವನಜಾಕ್ಷಿ, ವಿಕ್ರಂಗೌಡ ಸೇರಿ ಇನ್ನೂ ಸುಮಾರು ಜನರು ಬೇರೆ ರಾಜ್ಯಗಳ ನಕ್ಸಲ್ ಸಂಘಟನೆಯಲ್ಲಿ ಇನ್ನೂ ಸಕ್ರೀಯರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಕ್ಸಲೀಯರ ಸಕ್ರೀಯ ಚಟುವಟಿಕೆಗಳು ಕಂಡುಬಂದಿಲ್ಲ. ಶಸ್ತ್ರಸಹಿತ ಚಟುವಟಿಕೆಗಳಾಗಲಿ, ಬ್ಯಾನರ್, ಪೋಸ್ಟರ್ ಹಾಕುವ ಮೂಲಕ ಹೋರಾಟ ನಡೆಸುವಂತಹ ಚಟುವಟಿಕೆಗಳು ಎಲ್ಲೂ ಕಂಡುಬಂದಿಲ್ಲ ಎಂದರು.