ಚಿಕ್ಕಮಗಳೂರು: ಜೋಳದ ಜಮೀನಿಗೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಸಲಗವೊಂದು ಮೃತಪಟ್ಟಿರುವ ಘಟನೆ ತರೀಕೆರೆ ತಾಲ್ಲೂಕು ನಂದಿ ಬಟ್ಟಲು ಗ್ರಾಮದಲ್ಲಿ ನಡೆದಿದೆ.
ಭದ್ರಾ ಅಭಯಾರಣ್ಯದ ತಣಿಗೆಬೈಲು ವ್ಯಾಪ್ತಿಯ ಬಫರ್ ಪ್ರದೇಶದ ಸಮೀಪದಲ್ಲೇ ಈ ಜೋಳದ ಹೊಲ ಇದೆ. ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಮಾಲೀಕ ಪರಮೇಶ್ ಎಂಬುವವರು ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು.
ನೆನ್ನೆ ರಾತ್ರಿ ಜಮೀನಿನ ಕಡೆ ಬಂದಿದ್ದ ಸುಮಾರು ೩೦ ವರ್ಷದ ಕಾಡಾನೆಗೆ ವಿದ್ಯುತ್ ತಗುಲಿ ಹೊಟ್ಟೆ ಭಾಗ ಸೇರಿದಂತೆ ಹಲವು ಕಡೆ ಸುಟ್ಟ ಗಾಯಗಳಾಗಿವೆ.
ಪ್ರಕರಣ ಸಂಬಂಧ ಪೊಲೀಸ್ ಠಾಣೆ ದೂರು ದಾಖಲಾಗಿದೆ. ಈ ಭಾಗದಲ್ಲಿ ಅಕ್ರಮ ವಿದ್ಯುತ್ಗೆ ಬಲಿಯಾಗಿರುವ ನಾಲ್ಕನೇ ಆನೆ ಇದಾಗಿದೆ. ಸದ್ಯ ಜಮೀನಿನ ಮಾಲೀಕ ತಲೆ ತಪ್ಪಿಸಿಕೊಂಡಿದ್ದಾನೆ. ಇಲ್ಲಿ ಮಾನವ ಮತ್ತು ಆನೆ ಸಂಘರ್ಷ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಂಡಾನೆಗಳ ಸಾವು ನೋವು ತರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಭದ್ರಾ ಹುಲಿ ಮೀಸಲು ಪಶವೈದ್ಯಾಧಿಕಾರಿ ಯಶಸ್, ಲಿಂಗದಳ್ಳಿ ಪಶವೈದ್ಯಾಧಿಕಾರಿ ಬಸವರಾಜ್ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನ ಪ್ರಭ, ವಲಯ ಅರಣ್ಯಾಧಿಕಾರಿ ನವೀನ್, ವನ್ಯಜೀವಿ ಪರಿಪಾಲಕ ಜಿ.ವೀರೇಶ್, ಲಿಂಗದಳ್ಳಿ ಪೊಲೀಸ್ ಠಾಣಾಧಿಕಾರಿ ರವಿ ಇದ್ದರು.