ಚಿಕ್ಕಮಗಳೂರು: ದತ್ತಪೀಠದಲ್ಲಿ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ನೀಡದಿರುವುದನ್ನು ಖಂಡಿಸಿ ಕಾಳಿಮಠದ ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮುಜಾವರ್ ನೇತೃತ್ವದಲ್ಲಿ ಪೂಜಾ ವಿಧಿಗಳು ನಡೆಯಬೇಕು ಎಂದು 2018ರಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಆದೇಶವನ್ನು ಮೊನ್ನೆಯಷ್ಟೇ ಹೈಕೋರ್ಟ್ ರದ್ದು ಪಡಿಸಿದ್ದ ಬೆನ್ನಲ್ಲೇ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿದಂತೆ ಇತರೆ ಮುಖಂಡರು ಗುರುವಾರ ಬೆಳಗ್ಗೆ ದತಪೀಠಕ್ಕೆ ಭೇಟಿ ನೀಡಿ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಒತ್ತಾಯಿಸಿದರಾದರೂ ಅದಕ್ಕೆ ಅನುಮತಿ ನೀಡಲಿಲ್ಲ.
10 ಗಂಟೆಗೆ ಆಗಮಿಸಿದ ಋಷಿಕುಮಾರ ಸ್ವಾಮೀಜಿ ಶೀರಾಮಸೇನೆ ಕಾರ್ಯಕರ್ತರ ಜೊತೆ ಸೇರಿ ಗುಹಾಂತರ ದೇವಾಲಯಕ್ಕೆ ತೆರಳಿ ಪಾದುಕೆ ಪೂಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿದಾಗ ಅಧಿಕಾರಿಗಳು ನಿರಾಕರಿಸಿದರು. ಇದನ್ನು ಖಂಡಿಸಿ ಸ್ವಾಮೀಜಿ ಸೇರಿದಂತೆ ಎಲ್ಲರೂ ಗುಹಾಂತರ ದೇವಾಲಯದ ಬಾಗಿಲಲ್ಲೆ ಧರಣಿ ಕುಳಿತರು.
ಸ್ಥಲದಲ್ಲೇ ಅರ್ಚನೆ, ಪುಷ್ಪಾರ್ಚನೆ, ದೂಪಾರತಿ, ಹಣ್ಣುಕಾಯಿ ಪೂಜಿಸಿ ಭಜನೆ ಮಾಡಿ ರಾಮ ಚರಿತೆಯೊಂದಿಗೆ ನಾರಾಯಣ, ದತ್ತಸ್ತುತಿ ಮಾಡಿದರು. ಪ್ರತಿಭಟನೆ ನಡೆಸುತ್ತಿದ್ದುದರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರಿಗೆ ಗುಹೆ ಒಳಗೆ ಪ್ರವೇಶ ನಿರಾಕರಿಸಿದ್ದರಿಂದ ಪ್ರತಿಭಟನಾಕಾರರು ಗುಹಾಂತರ ದೇವಾಲಯದಿಂದ ಹೊರಬಂದು ಮೇಲ್ಭಾಗದ ಜಿಲ್ಲಾಡಳಿತದ ಕಚೇರಿ ಮುಂದೆ ಧರಣಿ ಕುಳಿತರು.
ನಂತರ ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್, ಡಿವೈಎಸ್ಪಿ ಪ್ರಭು ಅವರೊಂದಿಗೆ ಚರ್ಚಿಸಿದ ನಂತರ ಪ್ರತಿಭಟನೆ ಹಿಂಪಡೆದರು. ರಾಜ್ಯ ಉಪಾಧ್ಯಕ್ಷ ಮಹೇಶ್ಕುಮಾರ್ ಕಟ್ಟಿನಮನೆ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್, ಯೋಗಿ ಸಂಜಿತ್ ಸುವರ್ಣ, ಪುನೀತ್, ಶಶಾಂಕ್, ನವೀನ್, ಅಭಿಜಿತ್ ಮಳಲೂರು ಇದ್ದರು