ಚಿಕ್ಕಮಗಳೂರು: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದತ್ತಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಜಲಪಾತದ ಒಂದು ಬದಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ತಡೆಗೋಡೆಗೆ ಹಾನಿಯುಂಟಾಗಿದೆ. ಜಲಪಾತಕ್ಕೆ ನಿರ್ಮಿಸಲಾಗಿರುವ ಸೇತುವೆಯ ಒಂದು ಬದಿಯಲ್ಲಿ ಮಳೆಯ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸೇತುವೆ ಪಕ್ಕದಲ್ಲಿರುವ ಹೊನ್ನಮ್ಮ ದೇವರ ಗುಡಿಗೂ ಮಳೆಯಿಂದ ಹಾನಿ ಸಂಭವಿಸಿದೆ.
ಪಕ್ಕದಲ್ಲೇ ಇರುವ ಅಂಗಡಿಗಳಿಗೂ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಅಂಗಡಿಯ ಅಂಗಳದ ಚಪ್ಪಡಿ ಕಲ್ಲುಗಳು, ಶೆಡ್ಗೆ ಹಾಕಲಾಗಿದ್ದ ತಗಡಿನ ಶೀಟ್ಗಳೆಲ್ಲವೂ ಕೊಚ್ಚಿಕೊಂಡು ಹೋಗಿ ಸಾಕಷ್ಟು ನಷ್ಟ ಉಂಟಾಗಿದೆ. ದತ್ತಪೀಠಕ್ಕೆ ಭೇಟಿ ನೀಡುವ ಪ್ರತಿ ಪ್ರವಾಸಿಗರು ಹೊನ್ನಮ್ಮನ ಹಳ್ಳಕ್ಕೆ ಭೇಟಿ ನೀಡಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಗಿರಿ ಪ್ರದೇಶದಾದ್ಯಂತ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಸೀತಾಳಯ್ಯನ ಗಿರಿ ಬಳಿ ರಸ್ತೆ ತಿರುವೊಂದರಲ್ಲಿ ಕಲ್ಲು ಬಂಡೆಗಳು ಉರುಳಿಬಿದ್ದಿವೆ. ಅಲ್ಲಲ್ಲಿ ರಸ್ತೆಗೆ ಹಾನಿಯಾದ ವರದಿಗಳು ಬಂದಿವೆ.
ರಾತ್ರಿಯ ಮಳೆಯಿಂದ ತೇವಗೊಂಡಿದ್ದ ಚಿಕ್ಕಮಗಳೂರು ನಗರದ ಸಾಯಿ ಮಧುವನ ಬಡಾವಣೆಯಲ್ಲಿರುವ ಕರ್ನಾಟಕ ಓಪನ್ ಯೂನಿವರ್ಸಿಟಿ ಕಟ್ಟಡಕ್ಕೆ ಸಂಪರ್ಕಿಸುವ ರಸ್ತೆಗೆ ನಿರ್ಮಿಸಲಾಗಿದ್ದ ಸೇತುವೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಇದರಿಂದ ಪರೀಕ್ಷೆ ಬರೆಯಲು ತೆರಳಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳು ಕಟ್ಟಡದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಅಗ್ನಿಶಾಮದ ದಳದ ಸಿಬ್ಬಂದಿ ಧಾವಿಸಿ ವಿದ್ಯಾರ್ಥಿಗಳು ಸೇರಿದಂತೆ ಅಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕಾಲುವೆ ದಾಟಿಸಿದರು ಪಿಜಿ ವಿದ್ಯಾರ್ಥಿಗಳಿಗೆ ಇಂದು ಬ್ಯುಸಿನೆಸ್ ಪಾಲಿಸಿ ಅಂಡ್ ಮ್ಯಾನೇಜ್ಮೆಂಟ್ ಪರೀಕ್ಷೆ ನಡೆಯುತ್ತಿತ್ತು. ಮಳೆಯಿಂದಾಗಿ ನಗರದ ವಿವಿಧ ಬಡಾವಣೆಗಳಲ್ಲೂ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ.