ಸಕಲೇಶಪುರ ; ಅಂದು ಡಿಸೆಂಬರ್ 26 ನೇ ತಾರೀಖು , ರಾತ್ರಿ 7.30 ಘಂಟೆಗೆ ಹಾಸನ ಜಿಲ್ಲೆಯ ಯಸಳೂರು ಪೋಲೀಸ್ ಠಾಣಾ ವ್ಯಾಪ್ತಿಯ ಮರಡಿಕೆರೆ ಎಂಬಲ್ಲಿ ರಸ್ತೆ ಬದಿಯಲ್ಲೆ ಬೈಕ್ ಸವಾರನೊಬ್ಬ ಅಪಘಾತವಾಗಿ ಮೃತಪಟ್ಟಿದ್ದ.
ಸ್ಥಳಕ್ಕೆ ತೆರಳಿದ ಪೋಲೀಸರೂ ಯಾವುದೋ ವಾಹನವೊಂದು ಅಪಘಾತವೆಸಗಿ ಪರಾರಿಯಾಗಿದೆ ಎಂದು ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದರು. ಮೃತ ಬೈಕ್ ಸವಾರ ಶನಿವಾರ ಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿತ್ತು.
ಶವವನ್ನು ಸಕಲೇ಼ಪುರದ ತಾಲ್ಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಅಪಘಾತದಿಂದ ಸತ್ತಿಲ್ಲ , ಯಾವುದೋ ಬಲವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೋಲೀಸರಿಗೆ ತಿಳಿಸಿದರು.
ನಂತರ ಪೋಲೀಸರು 302 ಅನ್ವಯ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸತೊಡಗಿದರು. ತನಿಖೆ ತೀವ್ರಗೊಳಿಸಿದಾಗ ಮೃತನ ಪತ್ನಿ ಶ್ರುತಿಯೇ ತನ್ನ ಪ್ರಿಯಕರ ಚಂದ್ರಶೇಖರ ಎಂಬುವವನೊಂದಿಗೆ ಸೇರಿಕೊಂಡು ಗಂಡನ ಕೊಲೆ ಮಾಡಿಸಿರುವುದು ಧೃಢಪಟ್ಟಿತು.
ಈ ಕೊಲೆಯಲ್ಲಿ ಚಂದ್ರಶೇಖರನಿಗೆ ಸಹಾಯ ಮಾಡಿದ ಧರ್ಮರಾಜ ಎಂಬುವವನನ್ನೂ ಬಂಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ತನಿಖಾಧಿಕಾರಿ ಸಕಲೇಶಪುರ ಸರ್ಕಲ್ ಇನ್ಸ್ಪೆಕ್ಟರ್ ಚೈತನ್ಯ ಕುಮಾರ್ ಅವರು ಶ್ರುತಿ ಮತ್ತು ಗಾರೆ ಕೆಲಸ ಮಾಡುವ ಸಂತೋಷ್ 6 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಸಂತೋಷ್ ಗಾರೆ ಕೆಲಸಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುತಿದ್ದ.
ಈ ಸಂದರ್ಭದಲ್ಲಿ ಶ್ರುತಿಗೆ ಮನೆ ಪಕ್ಕದಲ್ಲೇ ಇದ್ದ ಚಂದ್ರಶೇಖರ ಎಂಬಾತನ ಮೇಲೆ ಪ್ರೀತಿ ಬೆಳೆದಿದೆ. ಇದು ಇಬ್ಬರ ನಡುವೆ ಅಕ್ರಮ ಸಂಬಂಧಕ್ಕೆ ಕಾರಣವಾಯಿತು. ಗಂಡ ಇದ್ದರೆ ಸಂಭಂದಕ್ಕೆ ಅಡ್ಡಿಯಾಗುತ್ತದೆ ಎಂದು ಅವನನ್ನೇ ಮುಗಿಸಿಬಿಡಲು ಸಂಚು ರೂಪಿಸುತ್ತಾರೆ. 26 ರಂದೇ ಮುಗಿಸಿಬಿಡಲು ಮುಹೂರ್ತ ಆವತ್ತು ಡಿಸೆಂಬರ್ 26 ರಂದು ಗಾರೆ ಕೆಲಸ ಮುಗಿಸಿ ಶನಿವಾರಸಂತೆಗೆ ಬರುವ ಗಂಡ ಸಂತೋಷ ಯಸಳೂರಿನ ರಸ್ತೆಯಲ್ಲೇ ಬರುತ್ತಾನೆ ಎಂದು ಶ್ರುತಿಗೆ ತಿಳಿದಿತ್ತು.
ಆಕೆಯ ಪ್ರಿಯಕರ ಚಂದ್ರಶೇಖರ ತನ್ನ ಸಹಚರ ಧರ್ಮ ರಾಜ ಎಂಬುವವನನ್ನು ಮಾರುತಿ 800 ಕಾರಿನಲ್ಲಿ ಕರೆದುಕೊಂಡು ಕಬ್ಬಿಣದ ರಾಡ್ ನೊಂದಿಗೆ ಸಜ್ಜಾಗಿಯೇ ನಿರ್ಜನ ಪ್ರದೇಶದಲ್ಲಿ ಕಾದು ಕೂರುತ್ತಾರೆ. ಧರ್ಮರಾಜನು ಕೈಯ್ಯಲ್ಲಿ ಪೆಟ್ರೋಲ್ ತುಂಬಿದ ಕ್ಯಾನ್ ಒಂದನ್ನು ಹಿಡಿದುಕೊಂಡು ಮೂರು ಕಿಲೋಮೀಟರ್ ದೂರದಲ್ಲಿ ನಿಂತಿರುತ್ತಾನೆ. ಸಂತೋಷನ ಬೈಕ್ ಬಂದ
ಕೂಡಲೇ ಕೈ ತಡೆದು ನಿಲ್ಲಿಸಿ ಪೆಟ್ರೋಲ್ ಇಲ್ಲದೆ ಕಾರು ನಿಂತು ಹೋಗಿದೆ ಎನ್ನುತ್ತಾನೆ.
ಪರಿಚಿತನೇ ಆಗಿದ್ದರಿಂದ ಬೈಕಿನಲ್ಲಿ ಕೂರಿಸಿಕೊಂಡ ಸಂತೋಷ ಕಾರು ಇರುವ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಚಂದ್ರಶೇಖರ ಕಾರಿಗೆ ಪೆಟ್ರೋಲ್ ತುಂಬಿಸುತ್ತಾನೆ. ಆದರೆ ಕಾರು ಸ್ಟಾರ್ಟ್ ಅಗುವುದಿಲ್ಲ. ನಂತರ ಬಾನೆಟ್ ಎತ್ತಿ ಏನೋ ಪರೀಕ್ಷೆ ಮಾಡುವವನಂತೆ ನಟಿಸುತ್ತಾನೆ. ಆಗ ಸಂತೋಷನೂ ಬೈಕ್ ನಿಂದ ಇಳಿದು ಬಾನೆಟ್ ಬಳಿ ಬಂದು ನೋಡುತ್ತಾನೆ. ಆಗ ಕಬ್ಬಿಣದ ರಾಡ್ ನೊಂದಿಗೆ ಹಿಂದಿನಿಂದ ಬಂದ ಧರ್ಮರಾಜ ತಲೆಗೆ ಹೊಡೆಯುತ್ತಾನೆ. ಬಾನೆಟ್ ನಲ್ಲಿದ್ದ ರಾಡ್ ತೆಗೆದುಕೊಂಡು ಚಂದ್ರಶೇಖರನೂ ಹೊಡೆಯುತ್ತಾನೆ. ಸಂತೋಷ ಏಟಿನಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಡುತ್ತಾನೆ. ಇದೆಲ್ಲ ಐದೇ ನಿಮಿಷದಲ್ಲಿ ನಡೆದುಹೋಗುತ್ತದೆ. ನಂತರ ಶವ ಬಿದ್ದಿದ್ದ ಸ್ಥಳದಲ್ಲೇ ರಕ್ತ ಚೆಲ್ಲಿದ್ದು ಆತನ ಬೈಕ್ ನ್ನು ಅಲ್ಲೇ ಬೀಳಿಸಿ ಕಾರಿನೊಂದಿಗೆ
ಬಂದು ಮನೆ ಸೇರಿಕೊಳ್ಳುತ್ತಾರೆ.
ಚುರುಕಾದ ಪೋಲೀಸ್ ತನಿಖೆಯಿಂದ ಪತ್ತೆಯಾದ ಹಂತಕರು ಇತ್ತ ಸಕಲೇಶಪುರದ ವೈದ್ಯರು ಅಪಘಾತವಲ್ಲ ಹತ್ಯೆ ಎಂಬ ಮಾಹಿತಿ ನೀಡಿದ ನಂತರ ಪೋಲೀಸ್ ತನಿಖೆ ಚುರುಕಾಗುತ್ತದೆ. ಶ್ರುತಿಯ ಮೊಬೈಲ್ ಸಿಡಿಆರ್ ಪಡೆಯುವ ಪೋಲೀಸರು ಆಕೆಯ
ಸಂಪರ್ಕಗಳ ಮೇಲೆ ಕಣ್ಗಾವಲು ಇರಿಸುತ್ತಾರೆ.
ಕೊಲೆಯ ನಂತರ ಶ್ರುತಿ ತನ್ನ ಪ್ರಿಯಕರನೊಂದಿಗೆ ಮಾತಾಡಿದನ್ನೂ ರೆಕಾರ್ಡ್ ಮಾಡಿಕೊಂಡ ಪೋಲೀಸರು ಜನವರಿ ನಾಲ್ಕರಂದು ತ್ಯಾಗರಾಜ ಕಾಲೋನಿಯಿಂದ ಮೂವರನ್ನೂ ಬಂಧಿಸುತ್ತಾರೆ.
ಪೋಲೀಸರ ಮುಂದೆ ತಪ್ಪೊಪ್ಪಿಕೊಂಡ ಮೂವರನ್ನೂ ಬುಧವಾರ ಸಕಲೇ಼ಶಪುರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಆರೋಪಿ ಶ್ರುತಿಗೆ ಒಂದು ಮಗು ಇದ್ದು ಚಂದ್ರಶೇಖರನಿಗೆ ಇಬ್ಬರು ಮಕ್ಕಳಿದ್ದಾರೆ. ಪೋಲೀಸ್ ತನಿಖೆ ಮುಂದುವರೆದಿದೆ.