ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ತನ್ನ ಸ್ವಂತ ಸಹೋದರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಮತ್ತು ಪತ್ನಿ ಲತಾಕೃಷ್ಣಮೂರ್ತಿ ಅವರ ಪರವಾಗಿ ಕಿಕ್ಕೇರಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಕೆ.ಆರ್.ಪೇಟೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವು ರದ್ದು ಪಡಿಸಿ ದಂಪತಿಗಳಿಗೆ ನೋಟೀಸ್ ನೀಡಿದೆ.
ಕಿಕ್ಕೇರಿ ಗ್ರಾಮದಲ್ಲಿ ವಾಸವಾಗಿರುವ ಅರ್ಚಕ ವೃತ್ತಿಯನ್ನು ನಡೆಸುತ್ತಿರುವ ರಂಗರಾಜು ಅವರಿಂದ ಅವರ ಸಹೋದರರಾದ ಕಿಕ್ಕೇರಿ ಕೃಷ್ಣಮೂರ್ತಿ 5 ಲಕ್ಷ ರೂ ಸಾಲವನ್ನು ಪಡೆದುಕೊಂಡಿದ್ದರು. ಬಳಿಕ ಅದನ್ನು ಹಿಂತಿರುಗಿಸುವಂತೆ ಸಹೋದರ ರಂಗರಾಜು ಕೇಳಿದ್ದ ವೇಳೆ ಇಬ್ಬರ ನಡುವೆ ಕಲಹ ಏರ್ಪಟ್ಟು ಆಕ್ರೋಶಗೊಂಡಿದ್ದ ಕಿಕ್ಕೇರಿಕೃಷ್ಣಮೂರ್ತಿ ತನ್ನ ಪತ್ನಿ ಲತಾ ಅವರೊಡಗೂಡಿ ದೊಣ್ಣೆಯಿಂದ ರಂಗರಾಜು ತಲೆಗೆ ಹೊಡೆದು ಹಲ್ಲೆ ನಡೆಸಿದ್ದರು. ಈ ಘಟನೆಯ ಸಂಬಂಧವಾಗಿ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ರಂಗರಾಜು ದೂರನ್ನು ದಾಖಲಿಸಿದ್ದರು.
ನಂತರ ಪ್ರಭಾವ ಬಳಸಿ ಕಿಕ್ಕೇರಿಕೃಷ್ಣಮೂರ್ತಿ ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗುವಂತೆ ನೋಡಿಕೊಂಡು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಇದನ್ನು ಕೆ.ಆರ್.ಪೇಟೆ ಪಟ್ಟಣದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಾಕ್ಷಾಧಾರಗಳನ್ನು ಹಾಜರುಪಡಿಸಿದ್ದ ರಂಗರಾಜು ಘಟನೆ ನಡೆದಿರುವುದನ್ನು ಸತ್ಯವೆಂದು ಸಾಬೀತುಪಡಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಕಿಕ್ಕೇರಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ವಜಾಗೊಳಿಸಿ ತನ್ನ ಸ್ವಂತ ಸಹೋದರನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಕಿಕ್ಕೇರಿ ಕೃಷ್ಣಮೂರ್ತಿ ದಂಪತಿಗೆ ನೋಟೀಸ್ ನೀಡುವಂತೆ ಹಾಗೂ ನಿಗಧಿತ ದಿನದಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ.