‘ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ. 1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಅದು ಭಿಕ್ಷೆ’ ಎಂಬ ಬಾಲಿವುಡ್ ನಟಿ -ನಿರ್ಮಾಪಕಿ ಕಂಗನಾ ರಣಾವತ್ ನೀಡಿದ ಹೇಳಿಕೆ ವಿವಾದಕ್ಕೆ ತಿರುಗಿದ್ದು, ವಿವಿಧ ರಾಜಕೀಯ ಪಕ್ಷಗಳು ಕಂಗನಾ ಹೇಳಿಕೆಯನ್ನು ಖಂಡಿಸಿದ್ದು, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಂತೆ ಒತ್ತಾಯಿಸಿದೆ.
ಇನ್ನು ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿದ ಕಂಗನಾ , ತಾವು ನೀಡಿದ ಸ್ವಾತಂತ್ರ್ಯದ ಕುರಿತ ಹೇಳಿಕೆ ತಪ್ಪೆಂದು ಸಾಬೀತಾದರೆ ಕ್ಷಮೆಯಾಚಿಸುವುದಾಗಿ ಹಾಗೂ ಪ್ರತಿಷ್ಠಿತ ಪದ್ಮಶ್ರೀಪ್ರಶಸ್ತಿ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಸ್ತಕವೊಂದರ ಆಯ್ದ ಭಾಗವನ್ನು ಹಂಚಿಕೊಂಡಿರುವ ನಟಿ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆಗೆ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ ಸಾವರ್ಕರ್ ಅವರಂತಹ ಶ್ರೇಷ್ಠರ ತ್ಯಾಗವನ್ನು ಸಂದರ್ಶನದಲ್ಲಿ ಉಲ್ಲೇಖಿಸಲಾಗಿದೆ.
1857ರ ಸ್ವಾತಂತ್ರ್ಯ ಹೋರಾಟ ನನಗೆ ತಿಳಿದಿದೆ. 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಯಾರಾದರೂ ನನ್ನ ಅರಿವಿಗೆ ತಂದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.
ಕಂಗನಾ ಹಂಚಿಕೊಂಡಿರುವ ಪುಸ್ತಕವೊಂದರ ಆಯ್ದ ಭಾಗದಲ್ಲಿ ಬಾಲಗಂಗಾಧರ ತಿಲಕ್, ಅರವಿಂದ್ ಘೋಷ್, ಬಿಪಿನ್ ಚಂದ್ರಪಾಲ್ರಂತಹ ಕ್ರಾಂತಿಕಾರಿ ಹೋರಾಟಗಾರರು ಐಎನ್ಸಿ (INC -Indian National Congress) ವಿರುದ್ಧ ನೀಡಿರುವ ಹೇಳಿಕೆಗಳು ಇವೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಭಾರತ ಸಜ್ಜಾಗುತ್ತಿರುವಾಗ ನಟಿಯ ಈ ಹೇಳಿಕೆಯನ್ನು ಕಾಂಗ್ರೆಸ್, ಎಎಪಿ, ಶಿವಸೇನೆ, ಎನ್ಸಿಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಖಂಡಿಸಿದ್ದು, ಕಂಗನಾಗೆ ನೀಡಿದ ಪ್ರಶಸ್ತಿಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸುತ್ತಿವೆ.