ಮಡಿಕೇರಿ: ಬುರ್ಖಾ ಧರಿಸಿ ಬಂದು ಮನೆಯಲ್ಲಿದ್ದ ಒಂಟಿ ವೃದ್ಧೆಯ ಕುತ್ತಿಗೆಯಿಂದ ಚಿನ್ನಾಭರಣವನ್ನು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ವಿರಾಜಪೇಟೆ -ಅಮ್ಮತ್ತಿ ರಸ್ತೆಯ ಕೊಮ್ಮೆತೋಡು (ಐಮಂಗಲ ಗ್ರಾಮ) ನ ಟೀ ಅಂಗಡಿ ಮಾಲೀಕ, ಅಲ್ಲಿಯ ಮಸೀದಿಯ ಆಡಳಿತ ಮಂಡಳಿಯ ಸದಸ್ಯನಾಗಿದ್ದ ಕೋಳುಮಂಡ ಹ್ಯಾರಿಸ್ ಬಂಧಿತ ಆರೋಪಿ. ಈತನನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಿ ಬಂಧಿಸಲಾಗಿದೆ.
ಈ ಘಟನೆ ಮೇ 21ರಂದು ನಡೆದಿದ್ದು, ಇದೀಗ ತಡವಾಗಿ ಇದೀಗ ಬೆಳಕಿಗೆ ಬಂದಿದೆ. ಆರೋಪಿ ಹ್ಯಾರಿಸ್ ಮೇ.21ರ ಸಂಜೆ ವಿರಾಜಪೇಟೆಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ತನ್ನ ಸಹೋದರ ಇಬ್ರಾಹಿಂ ರವರ ಮನೆಯಲ್ಲಿರುವ 80 ವರ್ಷದ ವೃದ್ದೆ, ತನ್ನ ತಂದೆಯ ತಂಗಿಯ (ಸೋದರತ್ತೆ) ಮನೆಗೆ ಬುರ್ಖ ಹಾಕಿಕೊಂಡು ಕೊಡೆ ಹಿಡಿದುಕೊಂಡು ಹೆಂಗಸಿನ ಚಪ್ಪಲಿ ಧರಿಸಿ ಮಾರುವೇಷದಲ್ಲಿ ಬಂದಿದ್ದನು.
ಈ ವೇಳೆ ವೃದ್ಧೆ ಒಬ್ಬಂಟಿಯಾಗಿದ್ದರು. ಹೀಗಾಗಿ ಅವರ ಮನೆಗೆ ನುಗ್ಗಿ ಅವರ ಮೈಮೇಲಿದ್ದ ಮೂರು ಪವನಿನ ಚಿನ್ನವನ್ನು ಕಸಿದುಕೊಂಡು ಪರಾರಿಯಾಗಿ ನಂತರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೂಲಕ ನಡೆದುಕೊಂಡು ಬಂದು ಟೆಂಡರ್ ಚಿಕ್ಕನ್ ಮುಂಭಾಗ ತನ್ನ ಕಾರಿನಲ್ಲಿ ಪರಾರಿಯಾಗಿದ್ದನು.
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಕೃತ್ಯ ನಡೆದ ಒಂದೆರಡು ದಿನಗಳ ಬಳಿಕ ಪೊಲೀಸರು ಸಿಸಿಟಿವಿ ಮೂಲಕ ಪತ್ತೆ ಹಚ್ಚಿ ಆರೋಪಿ ಹ್ಯಾರೀಸ್ ನನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಚಿನ್ನಾಭರಣ ಕಸಿದ ನಂತರ ಆರೋಪಿ ಹ್ಯಾರಿಸ್ ಚಿನ್ನವನ್ನು ಇರಿಟಿಯ ಚಿನ್ನಾಭರಣ ಮಳಿಗೆಗೆ ಮಾರಿದ ಹಣದಲ್ಲಿ ತನ್ನ ಮೊಮ್ಮಗಳಿಗೆ ಎರಡು ಚಿನ್ನದ ಓಲೆಯನ್ನು ಖರೀದಿಸಿದ್ದು ಬೆಳಕಿಗೆ ಬಂದಿದೆ.
ಆರೋಪಿಯು ಕೃತ್ಯವೆಸಗಿ ಸೋದರತ್ತೆಯ ಚಿನ್ನಾಭರಣವನ್ನು ತನ್ನ ಕೈವಶಗೊಳಿಸಿದ ನಂತರ ಅದೇ ದಿನ ಸಂಜೆ ಬಿಟ್ಟಂಗಾಲ- ಹಾತೂರು- ಬೈಗೋಡು ರಸ್ತೆ ಮೂಲಕವಾಗಿ ತನ್ನ ಕಾರಿನಲ್ಲಿ ಕೊಮ್ಮೆತೋಡುವಿನ ತನ್ನ ಮನೆಗೆ ಸೇರಿಕೊಂಡಿದ್ದನು. ಅಲ್ಲದೆ, ದಾರಿ ಮಧ್ಯೆ ಬೂರ್ಖವನ್ನು ಮತ್ತು ಚಪ್ಪಲಿಯನ್ನು ಕೂಡ ಎಸೆದಿದ್ದಾನೆ ಎಂಬುದನ್ನು ತನಿಖೆಯ ವೇಳೆ ಬಾಯಿಬಿಟ್ಟಿದ್ದಾನೆ.
ವಿರಾಜಪೇಟೆ ಭಾಗದಲ್ಲಿ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಸಿನಿಮೀಯ ರೀತಿಯಲ್ಲಿ ಕಳವು ನಡೆಸಿರುವುದು ಇದೇ ಪ್ರಥಮ ಎಂದು ಹೇಳಲಾಗಿದೆ. ಈ ಘಟನೆ ಬಳಿಕ ಯಾರನ್ನು ನಂಬುವುದು ಎಂಬ ಭಯ ಕಾಡುತ್ತಿದೆ.