ಕಾರವಾರ: ಯೋಗವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈಗ ಅದು ವಿಶ್ವ ಮಟ್ಟದಲ್ಲೂ ಹೆಸರುವಾಸಿಯಾಗಿದೆ ನಮ್ಮ ನಡೆ, ನೋಟವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾವುಗಳು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಪೋಲಿಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು, ಯೋಗವು ಮಾನಸಿಕ, ದೈಹಿಕ ಹಾಗೂ ಮನೋಧರ್ಮದ ಚಿಂತನೆಗಳನ್ನು ಹೊಂದಿದೆ ಎಂದರು.
ನಾವೆಲ್ಲರೂ ಸಾಮಾನ್ಯವಾಗಿ ದೈಹಿಕ ಅಂಶಗಳನ್ನು ಮಾತ್ರ ಗಮನಿಸುತ್ತೇವೆ ಅದರ ಜೊತೆಗೆ ನಾವೆಲ್ಲರೂ ಮಾನಸಿಕ ಹಾಗೂ ಮನೋಧರ್ಮದ ಅಂಶಗಳ ಕಡೆಗೂ ಗಮನ ನೀಡುವುದರಿಂದ ಸಮಾಜದಲ್ಲಿ ಹೆಚ್ಚಿನ ಸಾಮರಸ್ಯ ಬೆಳೆಸಲು ಅನುಕೂಲವಾಗುತ್ತದೆ ಎಂದರು.
ಕೇಂದ್ರ ಸರ್ಕಾರ 2014 ರಿಂದ ಇಲ್ಲಿಯ ವರೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಇದು ಒಂದು ಆರೋಗ್ಯಕರವಾದ ಬೆಳವಣಿಗೆಯಾಗಿದ್ದು ವಿಶ್ವ ಮಟ್ಟದಲ್ಲೂ ಇಂದು ಯೋಗವನ್ನು ಮಾಡುತ್ತಿದ್ದಾರೆ. ನಾವುಗಳು ಹೆಚ್ಚಾಗಿ ದೈಹಿಕ ಶ್ರಮ ಕೊಡುವುದರಿಂದ ಆರೋಗ್ಯಯುತವಾಗಿ ಬಾಳಲು ಸಹಕರಿಯಾಗುತ್ತದೆ ಮತ್ತು ಸಮಾಜದ ಸ್ವಸ್ತ್ಯವನ್ನು ಕಾಪಾಡಲು ಸಹಾಯಕಾರಿ ಯಾಗುತ್ತದೆ ಎಂದರು.
ಬಳಿಕ ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಈ ಬಾರಿ ‘ಯೋಗ ಫಾರ್ ವಸುದೈವ ಕುಟುಂಬಕಂ’ ಎಂಬ ಧ್ಯೇಯ್ ವಾಕ್ಯದೊಂದಿಗೆ ಯೋಗ ದಿನಾಚರಣೆ ಮಾಡುತ್ತಿದ್ದೇವೆ. ಜಗತ್ತೇ ಕುಟುಂಬ ಎಂಬ ಭಾರತದಲ್ಲಿ ಕುಟುಂಬಕ್ಕೆ ಯೋಗ ಅವಶ್ಯಕ ಎನ್ನುವುದು ಈ ಘೋಷಣೆಯ ಹಿಂದಿನ ತರ್ಕ. ಪ್ರತಿನಿತ್ಯದ ದಿನಚರಿಯಲ್ಲಿ ನಾವು ಯೋಗವನ್ನು ಅಳವಡಿಸಿಕೊಳ್ಳಬೇಕಿದೆ. ವರ್ಷದ ದೀರ್ಘ ಅವಧಿಯ ದಿನವಾದ ಕಾರಣ ಜೂ.21ರಂದು ಪ್ರತಿ ವರ್ಷ ಯೋಗ ದಿನವನ್ನಾಚರಿಸಲಾಗುತ್ತದೆ. ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ವೃದ್ಧಿಗೆ ಯೋಗ ಅತ್ಯಗತ್ಯ. ಕಾಯಿಲೆ ಬರುವ ಮುನ್ನವೇ ಮುಂಜಾಗ್ರತೆ ವಹಿಸುವುದು ಉತ್ತಮ. ಇದು ಕೋವಿಡ್ ಸಮಯದಲ್ಲಿ ಎಲ್ಲರಿಗೂ ಅರಿವಾಗಿದೆ. ಯೋಗ, ಪ್ರಾಣಾಯಾಮ ಇಂಥ ಕಾಯಿಲೆಗಳಿಗೆ ರಾಮಬಾಣದಂತಿದ್ದು, ಮನುಷ್ಯರನ್ನ ಸದೃಢವನ್ನಾಗಿಸುತ್ತದೆ ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಖಂಡೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಐಎಎಸ್ ಪ್ರೊಬೆಶನರಿಯಾಗಿರುವ ಜೊಯಿಡಾ ತಹಸೀಲ್ದಾರ್ ಜುಬಿನ್ ಮಹಾಪಾತ್ರ ಸೇರಿದಂತೆ ಅನೇಕರು ಈ ವೇಳೆ ಯೋಗಾಭ್ಯಾಸ ಮಾಡಿದರು. ರೆಡ್ ಕ್ರಾಸ್, ಪತಂಜಲಿ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಈ ಸಾಮೂಹಿಕವಾಗಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಯೋಗಾಭ್ಯಾಸದ ಬಳಿಕ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಯೋಗ ಭಂಗಿ, ನೃತ್ಯ ಪ್ರದರ್ಶನ ನಡೆಯಿತು.