ಕಾರವಾರ: ಶಿರಸಿ ತಾಲೂಕಿನ ಶಿಗೇಹಳ್ಳಿ ಗ್ರಾಮದ ಕೋಟೆಬೈಲಿನಲ್ಲಿ ಮುರಿದು ಬಿದ್ದ ಸುಮಾರು 50 ಅಡಿ ಉದ್ದದ ತೂಗು ಸೇತುವೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಯೋಜನಾಧಿಕಾರಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.
ಕೋಟೆಬೈಲ್ ಗ್ರಾಮದ ಒಂದು ಕಡೆ 9 ಮನೆ ಹಾಗು ಇನ್ನೊಂದು ಕಡೆಯಲ್ಲಿ 10 ಮನೆಗಳಿದ್ದು ಇಲ್ಲಿನ ಗ್ರಾಮಸ್ಥರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಮಳೆಗಾಲದಲ್ಲಿ ಹೊಳೆ ಅಡ್ಡಿಯಾಗಿತ್ತು. ಇದನ್ನು ಮನಗಂಡ ಅಲ್ಲಿನ ಗ್ರಾಮಸ್ಥರು ಓಡಾಟಕ್ಕಾಗಿ ತಾವೇ ತೂಗು ಸೇತುವೆಯನ್ನು ನಿರ್ಮಿಸಿಕೊಂಡಿದ್ದರು.
ಅದು ಕಳೆದ ವರ್ಷ ಮರಿದು ಬಿದ್ದು ಅದೇ ಗ್ರಾಮದ ಮಹಿಳೆಯೋರ್ವರು ಎಂಬುವರು ಕಾಲು ಮುರಿದುಕೊಂಡಿದ್ದರು. ಇದನ್ನು ತಿಳಿದ ಶ್ರೀ.ಕ್ಷೇತ್ರ ರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ತಮ್ಮ ಶೌರ್ಯ ತಂಡದ ಸಹಾಯದಿಂದ ತೂಗು ಸೇತುವೆ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದಾಗಿ ಅಲ್ಲಿನ ಗ್ರಾಮಸ್ಥರಿಗೆ 10 ಕಿ.ಮೀ. ದೂರ ಕಡಿಮೆಯಾದಂತಾಗಿದೆ. ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನಗರಕ್ಕೆ ವ್ಯವಹಾರಕ್ಕೆಂದು ಬರುವ ಗ್ರಾಮಸ್ಥರಿಗೆ ಅನುಕೂಲವಾದಂತಾಗಿದೆ. ಸೇತುವೆ ನಿರ್ಮಾಣ ಮಾಡಲು ಶೌರ್ಯ ತಂಡಕ್ಕೆ ಗ್ರಾಮಸ್ಥರು ಕೂಡಾ ಕೈ ಜೋಡಿಸಿದ್ದಾರೆ. ಸಂಯೋಜಕರಾದ ಸವಿತಾ, ಸೇವಾ ಪ್ರತಿನಿಧಿ ರಾಧಾ, ಶೌರ್ಯ ತಂಡದ ನರಸಿಂಹ, ಘಟಕ ಪ್ರತಿನಿಧಿ ಮಂಜುನಾಥ, ಆನಂದ, ನಾಗರಾಜ, ಮಮತಾ ಸೇತುವೆ ನಿರ್ಮಾಣದಲಿ ಪ್ರಮುಖ ಪಾತ್ರ ವಹಿಸಿದ್ದಾರೆ.