ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟೂ ಆರು ಕ್ಷೇತ್ರಗಳಿದ್ದರೂ ಕೇವಲ ಶಿರಸಿ-ಸಿದ್ದಾಪುರ ಒಂದೇ ಕ್ಷೇತ್ರಕ್ಕೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ನಾಮದಾರಿ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ, ನಾರಾಯಗುರು ಶಕ್ತಿಪೀಠದ ಪೀಠಾಧೀಪತಿ ಪ್ರಣಾವಾನಂದ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ಗಾಗಿ 12 ಜನ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದೇ ಟಿಕೆಟ್ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ. ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದೇ ಇದ್ದಲ್ಲಿ ಕಾಂಗ್ರೆಸ್ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.
ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ. ಈ ಅಸಮಾನತೆಯನ್ನು ಸರಿಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪಾದಯಾತ್ರೆ ಕೈಗೊಳ್ಳುವ ಮೂಲಕ ಸಮುದಾಯದ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುತ್ತೇನೆ ಎಂದು ಅವರು ತಿಳಿಸಿದರು. ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ಪ್ರಾಮಾಣಿಕ ವ್ಯಕ್ತಿ. ಅವರಿಗೆ ನಾಮಧಾರಿ ಸಮಾಜದ ಬೆಂಬಲ ಇದ್ದೇ ಇದೆ. ಸಹೋದರ ಸಮಾಜಗಳು ಅವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಸೂರಜ್ ನಾಯ್ಕ ಸೋನಿ ಅವರು ರಾಜಕೀಯ ಪ್ರಚಾರ ಸಂದರ್ಭದಲ್ಲಿ ಅವರಿಗೆ ಅಧಿಕಾರಿಗಳು ತೊಂದರೆ ಕೊಡುವ ಮೂಲಕ ಹಿಂದೂಳಿದವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. ಬಂಟ ಸಮುದಾಯಕ್ಕೆ ಟಿಕೆಟ್ ಕೊಡದಿದ್ದರೆ, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ನವರಿಗೆ ಭಯ ಇದೆ. ಆದರೆ, ನಾಮಧಾರಿ ಸಮಾಜಕ್ಕೆ ಕೊಡದಿದ್ದರೆ ಭಯವಿಲ್ಲ. ಸಮುದಾಯದ ಸಂಘಟನೆಯಲ್ಲಿ ಇರುವ ಲೋಪಗಳು ಇದಕ್ಕೆ ಕಾರಣ ಇರಬಹುದು ಎಂದು ಅವರು ತಿಳಿಸಿದರು.