ಕಾರವಾರ: ನೌಕಾನೆಲೆ ನಿರಾಶ್ರಿತರು ಸುಮಾರು ಮೂರು ದಶಕಗಳಿಂದ ಪರಿಹಾರ ಸಿಗದೆ ತೊಂದರೆಗೊಳಗಾಗಿದ್ದರು. ಆದರೆ, ನಾನು ಶಾಸಕಿಯಾದಾಗ ಸ್ಥಳೀಯರ ನಿಯೋಗದೊಂದಿಗೆ ಸಂಸದ ಅನಂತಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ದೆಹಲಿಗೆ ಹೋಗಿ ಸಮಸ್ಯೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಅವರಲ್ಲಿ ವಿವರಿಸಿ, ಮನವರಿಕೆ ಮಾಡಿಕೊಟ್ಟ ನಂತರ ಹಣ ಸಂದಾಯವಾಗಿದೆ. ನಿರಾಶ್ರಿತರಿಗೆ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ ಸಮಾಧಾನ ನನಗಿದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದಗಾ ಕಾಲೋನಿಯ ರಸ್ತೆ 0.00 ಕಿ.ಮೀ ರಿಂದ 3.80 ಕಿ.ಮೀ.ವರೆಗೆ ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ನಾನು ಶಾಸಕಿಯಾದಾಗ ಇಲ್ಲಿ ಭೇಟಿ ನೀಡಿದಾಗ ಚರಂಡಿ, ವಿದ್ಯುತ್ಕಂಬ, ತಂತಿ ರಸ್ತೆ ಇಲ್ಲಿರುವ ಸಮಸ್ಯೆಯನ್ನು ಅರಿತು ಸರ್ವೆ ಮಾಡಿಸಿ ರಸ್ತೆಗೆ ಒಂದು ಕೋಟಿ ರೂಪಾಯಿಯನ್ನು ನೀಡಲಾಗಿದೆ. ಅಲ್ಲದೇ, ಇಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಅನಾಹುತಸಂಭವಿಸುವ ಮೊದಲು ಸರಿಪಡಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ವಿಸ್ತೃತ ವರದಿಯನ್ನು ಸಲ್ಲಿಸಲಾಗಿದೆ. ಅದೂ ಕೂಡ ಶೀಘ್ರದಲ್ಲಿ ಆಗುತ್ತದೆ. ಚರಂಡಿ ಸಮಸ್ಯೆಯನ್ನು ನಿವಾರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರ ಮೀನುಗಾರರಿಗೆ, ರೈತರಿಗೆ ಕಿಸಾನ್ಕಾರ್ಡ್ನ್ನು ಮಾಡಿದೆ. ಆದರೆ, ನನ್ನ ಕ್ಷೇತ್ರದ ಜನರು ಅತಿ ಕಡಿಮೆ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ. ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಎಲ್ಲರೂ ಇದರ ಲಾಭವನ್ನು ಪಡೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರರಿಗೆ ಹಾಗೂ ನೀರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ್ದಾರೆ ಎಂದರು.
ಕೋವಿಡ್ಸಂದರ್ಭದಲ್ಲಿ ಮೀನುಗಾರಿಗೆ ವಿಶೇಷ ಪ್ಯಾಕೇಜ್ಘೋಷಣೆ ಮಾಡುವಂತೆ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಲ್ಲಿ ಕೇಳಿಕೊಂಡಾಗ ಪ್ರತ್ಯೇಕ ಪ್ಯಾಕೇಜ್ಘೋಷಿಸಿದ್ದರು. ನಂತರ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಮೀನುಗಾರರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆಶಾ ನಾಯ್ಕ, ಉಪಾಧ್ಯಕ್ಷರಾದ ರವಿ ದುರ್ಗೇಕರ, ಸದಸ್ಯರು, ಊರಿನ ಮುಖಂಡರು, ಸಾರ್ವಜನಿಕರು, ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಘನತ್ಯಾಜ್ಯ ಘಟಕ ಉದ್ಘಾಟನೆ: ನೂತನವಾಗಿ ನಿರ್ಮಾಣಗೊಂಡ ಘನತ್ಯಾಜ್ಯ ಘಟಕವನ್ನು ಅಮದಳ್ಳಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಉದ್ಘಾಟಿಸಿದರು. ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡುವುದು ಅವಶ್ಯಕವಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ಅವಶ್ಯಕವಾಗಿದೆ ಎಂದರು.