ಕುಂದಾಪುರ: ಮಕರ ಸಂಕ್ರಾತಿ ದಿನದಂದು ವಿಜೃಂಭಣೆಯಿಂದ ನಡೆಯುವ ಕುಂದಾಪುರ ತಾಲೂಕಿನ ಮಾರಣಕಟ್ಟೆ ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮುಕ್ತಗೊಳಿಸಲು ಕ್ಲೀನ್ ತ್ರಾಸಿ – ಮರವಂತೆ ಪ್ರಾಜೆಕ್ಟ್ ತಂಡ ಪೋಸ್ಟರ್ ಅಭಿಯಾನದ ಮೂಲಕ ಜನ ಜಾಗೃತಿ ಮೂಡಿಸುವ ಮುಖೇನ ಪರಿಸರ ಕಾಳಜಿ ಮೆರೆದಿದೆ.
ಜ.14, 15, 16 ರಂದು ನೆರವೇರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಗೆ ಕುಂದಾಪುರ,ಬೈಂದೂರು ಮಾತ್ರವಲ್ಲದೆ ತುಳುನಾಡಿನ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ.ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತದೆ.
ಜಾತ್ರೆಯ ವ್ಯಾಪಾರದ ಸಂದರ್ಭದಲ್ಲಿ ಪ್ಲಾಸ್ಟಿಕ್ ಝುರೀ ಮತ್ತು ಲೋಟ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಕೆ ಮಾಡಲಾಗುತ್ತದೆ ಜನ ಜಂಗುಳಿ ತುಂಬಿದ ಜಾತ್ರೆಯಲ್ಲಿ ಲೋಡುಗಟ್ಟಲೇ ನಿರೂಪಯುಕ್ತ ಕಸ ಉತ್ಪತಿಯಾಗುತ್ತದೆ.
ಜಾತ್ರೆಗಳಲ್ಲಿ ಬಳಕೆಯಾಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ಗೆ ಕಡಿವಾಣ ಹಾಕುವ ಉದ್ದೇಶದಿಂದ ಕ್ಲೀನ್ ತ್ರಾಸಿ-ಮರವಂತೆ ಪ್ರಾಜೆಕ್ಟ್ ಯುವಕರ ತಂಡ ಜನ ಜಾಗೃತಿ ಮೂಲಕ ಪ್ಲಾಸ್ಟಿಕ್ ಮುಕ್ತ ಜಾತ್ರೆ ನಡೆಯಬೇಕ್ಕೆನ್ನುವ ಆಶಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿದೆ.
ಮನೆಯಿಂದಲೇ ಕೈ ಚೀಲಗಳನ್ನು ತರಬೇಕು,ದೇವರಿಗೆ ಹೂ ಹಣ್ಣು ಕಾಯಿ ಅರ್ಪಣೆ ಮಾಡುವವರು ಆದಷ್ಟು ಸಾಂಪ್ರದಾಯಿಕ ಶೈಲಿಯ ಬುಟ್ಟಿಗಳನ್ನು, ಬಟ್ಟೆ ಚೀಲಗಳನ್ನು ಬಳಕೆ ಮಾಡುವುದು, ಜಾತ್ರೆಯಲ್ಲಿ ಸಾಮಾನುಗಳನ್ನು ಖರೀದಿಸುವ ಸಂದರ್ಭದಲ್ಲಿ ಪ್ರತಿ ವಸ್ತುಗಳಿಗೂ ಅಂಗಡಿಯವರಿಂದ ಪ್ಲಾಸ್ಟಿಕ್ಯನ್ನು ಪಡೆದುಕೊಳ್ಳದೆ ಇರುವುದು, ನೀರಿನ ಬಾಟಲಿಗಳನ್ನು ಬೇಕಾಬಿಟ್ಟೆಯಾಗಿ ಎಲ್ಲೆಂದರಲ್ಲಿ ಎಸೆಯದೆ ಇರುವುದು ಅಭಿಯಾನದ ಮೂಲ ಉದ್ದೇಶವಾಗಿದೆ.