ಕಾರವಾರ: ಮಾಂಡೌಸ್ ಚಂಡಮಾರುತದ ಪರಿಣಾಮವಾಗಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದಾಗಿ ಕಾರವಾರ ಸಮುದ್ರ ವ್ಯಾಪ್ತಿಯಲ್ಲಿ ಹಲವಾರು ಬೋಟುಗಳು ನಗರದ ಬಂದರು ಪ್ರದೇಶದ ಬಳಿ ಲಂಗರು ಹಾಕಿವೆ.
ತಮಿಳುನಾಡು, ಕೇರಳ ಭಾಗದಲ್ಲಿ ಉಂಟಾಗಿರುವ ಮಾಂಡೌಸ್ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಏರು ಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೀನುಗಾರಿಕೆ ಇಲಾಖೆಯು ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ.
ಇನ್ನು ಈ ಮೊದಲೇ ಆಳ ಸಮುದ್ರ ಮೀನುಗಾರಿಕೆಗೆಂದು ಕಡಲಿಗೆ ಇಳಿದಿದ್ದ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದ ಬೋಟುಗಳು ಆಳ ಸಮುದ್ರದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯದ ಮಾಹಿತಿಯಂತೆ ಹತ್ತಿರದ ಬಂದರುಗಳತ್ತ ತೆರಳಿವೆ. ಅದರಂತೆ ನೈಸರ್ಗಿಕ ಬಂದರು ಎಂದು ಖ್ಯಾತಿ ಪಡೆದಿರುವ ಕಾರವಾರ ಬಂದರಿನ ಬಳಿ ೨೦ಕ್ಕೂ ಹೆಚ್ಚು ತಮಿಳುನಾಡು ಬೋಟುಗಳು ಆಗಮಿಸಿ ಲಂಗರು ಹಾಕಿವೆ.