ಕಾರವಾರ: ತಾಲೂಕಿನಾದ್ಯಂತ ವಟ ಸಾವಿತ್ರಿ ವ್ರತವನ್ನು ಮಹಿಳೆಯರ ಶ್ರದ್ಧಾ ಭಕ್ತಿಯಿಂದ ಶನಿವಾರ ಆಚರಿಸಿದರು. ಏಳೇಳು ಜನ್ಮಕ್ಕೂ ತನ್ನ ಪತಿ ತನ್ನವನಾಗಿಯೇ ಇರಲಿ, ಆತನ ಆಯುಷ್ಯ-ಆರೋಗ್ಯ ವೃದ್ಧಿಸಲಿ ಎಂದು ಪ್ರಾರ್ಥಿಸಿದರು.
ಕಾರವಾರದಲ್ಲಿ ವಟ ಸಾವಿತ್ರಿ ವ್ರತಾಚರಣೆ. ಜೇಷ್ಠ ಹುಣ್ಣಿಮೆಯ ದಿನವಾದ ಶನಿವಾರ ಕಾರವಾರದಲ್ಲಿ ಸ್ತ್ರೀಯರು ವಟ ಸಾವಿತ್ರಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಕಾರವಾರದ ಸುತ್ತಮುತ್ತಲ ಆಲದ ಮರದ ಸಮೀಪ ನೂರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು.
ಸುತ್ತಮುತ್ತಲಿನ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ತನ್ನ ಗಂಡ, ಮಕ್ಕಳು, ಕುಟುಂಬಗಳಿಗೆ ಆಯುಷ್ಯ ವೃದ್ಧಿಗೊಳಿಸುವಂತೆ ಬೇಡಿಕೊಂಡರು. ಪರಸ್ಪರ ಅರಿಶಿಣ-ಕುಂಕುಮ, ಹೂಗಳನ್ನು ವಿನಿಮಯ ಮಾಡಿಕೊಂಡು ಸ್ತ್ರೀಯರು ಸಂತಾನ ವೃದ್ಧಿಗಾಗಿ ಪ್ರಾರ್ಥಿಸಿದರು. ಪುರಾಣದಲ್ಲಿ ಯಮ ಧರ್ಮನು ಸತ್ಯವಾನನ ಪ್ರಾಣ ಹರಣ ಮಾಡಿದ ನಂತರ ಸಾವಿತ್ರಿ ಯಮಧರ್ಮನೊಂದಿಗೆ ಮೂರು ದಿನಗಳ ಕಾಲ ವಟ ವೃಕ್ಷದ ಕೆಳಗೆ ಕುಳಿತು ಶಾಸ್ತ್ರ ಚರ್ಚೆಯನ್ನು ಮಾಡುತ್ತಾಳೆ. ಅದರಿಂದ ಪ್ರಸನ್ನನಾಗಿ ಯಮಧರ್ಮ ಸತ್ಯವಾನನಿಗೆ ಪುನಃ ಜೀವಂತಗೊಳಿಸುತ್ತಾನೆ. ಹೀಗಾಗಿ, ವಟ ವೃಕ್ಷಕ್ಕೆ ಸಾವಿತ್ರಿ ಹೆಸರು ಸೇರಿಕೊಂಡಿತು.
ಸಾವಿತ್ರಿ ತನ್ನ ಪತಿಯ ಆಯುಷ್ಯ ವೃದ್ಧಿಸಬೇಕೆಂದು ಹಾರೈಸಿದ ಹಾಗೆ ಸ್ತ್ರೀಯರು ಈ ದಿನದಂದು ತಮ್ಮ ಪತಿಯ ಆಯುಷ್ಯ ವೃದ್ಧಿಯಾಗುವ ನಂಬಿಕೆ ನಮ್ಮಲ್ಲಿದೆ ಎನ್ನುತ್ತಾರೆ ಭಕ್ತರು.ವಟ ಸಾವಿತ್ರಿ ಹುಣ್ಣೆಮೆಯಂದು ಸ್ತ್ರೀಯರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪೂಜಾ ಕೈಂಕರ್ಯದೊಂದಿಗೆ ಆಲದ ಮರಕ್ಕೆ ಹತ್ತಿ ನೂಲು ಸುತ್ತುತ್ತಾರೆ. ಆಲದ ಮರದಲ್ಲಿ ಶಿವನ ರೂಪವಿದ್ದು, ವಟ ವೃಕ್ಷಕ್ಕೆ ದಾರ ಸುತ್ತುವುದರಿಂದ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವತತ್ವಕ್ಕೆ ಸಂಬಂಧಪಟ್ಟ ಲಹರಿಗಳು ಕಾರ್ಯನಿರತವಾಗಿ, ಆಕಾರವನ್ನು ಧರಿಸುತ್ತದೆ. ಹೀಗಾಗಿ, ವೃಕ್ಷಕ್ಕೆ ಆರತಿ ಬೆಳಗುತ್ತಾರೆ. ಪಂಚ ಫಲಗಳನ್ನು ಇಟ್ಟು ಆರಾಧಿಸಿದರು.