ಕಾರವಾರ: ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಇದೇ ಮೊದಲ ಬಾರಿ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿಗಳ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತಕ್ಕೆ ಅವಕಾಶ ದೊರೆತಿದ್ದು ತಂಡವು ಅಭ್ಯಾಸ ಫರೇಡ್ ನಲ್ಲಿ ಗಮನ ಸೆಳೆಯಿತು.
ತಾಲೂಕಿನ ಅಮದಳ್ಳಿಯ ಶ್ರೀ ಬಂಟದೇವ ಯುವಕ ಸಂಘ ಸಾಣೇಮಕ್ಕಿಯ ಸುಗ್ಗಿ ಕುಣಿತ ಕಲಾವಿದರು ಜ.16ರಂದು ದೆಹಲಿ ತಲುಪಿ 17 ಬೆಳಿಗ್ಗೆ ಕೊರೆಯುವ ಚಳಿಯಲ್ಲೂ ಅಭ್ಯಾಸ ನಡೆಸಿ 23 ರಂದು ಅಂತೀಮ ಹಂತದ ಅಭ್ಯಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ತಂಡದ ಮುಂದಾಳತ್ವ ವಹಿಸಿರುವ ಜಾನಪದ ಕಲಾವಿದ ಪುರುಷೋತ್ತಮ ಗೌಡ ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಈ ನಡುವೆ ಆರ್ಮಿಯ ಆರ್. ಆರ್. ಕ್ಯಾಂಪ್ ನ “ಝೇಂಕಾರ” ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲೂ ತಂಡ ಉತ್ತಮ ಪ್ರದರ್ಶನ ನೀಡಿ ಜನಮನ ಗೆದ್ದಿದೆ. ಇಂತಹ ಅವಕಾಶ ದೊರಕಲು ಕಾರಣೀಕರ್ತರಾದ ಸಿ.ಎಂ. ಬಸವರಾಜ ಬೊಮ್ಮಾಯಿ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಸುಗ್ಗಿ ಕುಣಿತದ ಕಲಾ ತಂಡದಲ್ಲಿ ಪುರುಷೋತ್ತಮ ಗೌಡ ಮುಂದಾಳತ್ವದಲ್ಲಿ ಮಂಜುನಾಥ, ಸುದೀಪ, ನವೀನ, ಅಬಿಷೇಕ, ನಾಗೇಂದ್ರ, ವೈರಮುಡಿ, ಪ್ರಶಾಂತ, ಜಿತೇಶ, ಶೈಲೇಶ, ಬಸವರಾಜ, ಲೊಕೇಶ, ಶಿವರಾಜ, ಸವಿತಾ, ವಿನುತಾ, ನಾಗರತ್ನಾ, ಬೇಬಿ, ಸುಧಾ, ಚೇತನಾ, ಜಯಶ್ರೀ, ಚಿಂತನಾ, ಸಿಂಧುಜಾ, ಸೋನಿಯಾ, ಧನ್ಯಾ, ಪೂಜಾ ಭಾಗವಹಿಸಿದ್ದಾರೆ.