ಕುಂದಾಪುರ: ಮೀನುಗಾರಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೈಂದೂರು ತಾಲೂಕಿನಲ್ಲಿ ಸೀ ಫುಡ್ ಪಾರ್ಕ್ ಸ್ಥಾಪಿಸಲು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್ನಲ್ಲಿ ಘೋಷಣೆ ಮಾಡಿರುವಂತೆ ಮುಂಬರುವ ದಿನಗಳಲ್ಲಿ ಸೀ ಫುಡ್ ಪಾರ್ಕ್ ಬೈಂದೂರು ಭಾಗದಲ್ಲಿ ನಿರ್ಮಾಣವಾದರೆ ಮೀನುಗಾರಿಕಾ ಕ್ಷೇತ್ರಕ್ಕೆ ಪ್ರಯೋಜನೆ ದೊರೆಯಲ್ಲಿದ್ದು ಉದ್ಯೋಗಾವಕಾಶಗಳು ಸೃಷ್ಟಿ ಆಗುವ ಸಾಧ್ಯತೆಗಳಿವೆ.
2023-24 ನೇ ಸಾಲಿನ 3 ಲಕ್ಷ 7 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿ ಭಾಗದ ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುವುದರ ಮುಖೇನ ಚುನಾವಣೆ ಸಂದರ್ಭದಲ್ಲಿ ಮೀನುಗಾರರನ್ನು ಒಲೈಕೆ ಮಾಡಿದ್ದಾರೆ.
ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಚಾಲಿತ ದೋಣಿಗಳಿಗೆ ಪೆಟರೋಲ್, ಡಿಸೇಲ್ ಆಧಾರಿತ ಮೋಟರ್ ಇಂಜಿನ್ ಅನ್ನು ಅಳವಡಿಸಲು ತಲಾ 50,000.ರೂ ನಂತೆ ಸಹಾಯಧನವನ್ನು ನೀಡಲಾಗುವುದು ಎಂದು ಹೇಳಿರುವ ಮುಖ್ಯ ಮಂತ್ರಿಗಳು 40 ಕೋಟಿ.ರೂ ಹಣವನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ವರಗೆ ಸಬ್ಸಿಡಿ ಸೀಮೆ ಎಣ್ಣೆ ನೀಡುವುದು ಮುಂದುವರಿಯಲಿದೆ.
ಮತ್ಸ್ಯಸಿರಿ ಯೋಜನೆ: ಮೀನುಗಾರರ ದೋಣಿಗಳಿಗಳಿಗಾಗಿ ನೀಡುತ್ತಿರುವ ರಿಯಾತಿ ಡಿಸೇಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್ ನಿಮದ 2 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸಲಾಗುವುದು ,ಆಳ ಸಮುದ್ರ ಮೀನುಗಾರಿಕೆ ಮತ್ಸ್ಯಸಿರಿ ಯೋಜನೆ ಆರಂಭ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ, ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ, ಸೀಗಡಿ ಮೀನು ರಪ್ತುಗೆ ಪ್ರೋತ್ಸಾಹಿಸಲು ಸುಂಕ ಕಡಿಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಮೀನುಗಾರರ ಪರವಾಗಿ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಕರಾವಳಿ ಭಾಗದ ಮೀನುಗಾರರಿಗೆ ಸೀಮೆಎಣ್ಣೆ ನೀಡುವ ಕುರಿತು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ. ಕರಾವಳಿ ಅಭಿವೃದ್ಧಿ ಬಗ್ಗೆ ಬಜೆಟ್ನಲ್ಲಿ ಯೋಜನೆಗಳಿಲ್ಲ. ಇದೊಂದು ನಿರಾಶದಾಯಕ ಬಜೆಟ್ ಆಗಿದೆ ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಮೀನುಗಾರರ ಉತ್ತೇಜನಕ್ಕೆ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗಿದೆ.ಸೀಮೆಎಣ್ಣೆ ಆಧಾರಿತ ಮೋಟಾರ್ ದೋಣಿಗಳಲ್ಲಿ ಪೆಟ್ರೋಲ್, ಡಿಸೇಲ್ ಆಧಾರಿತ ಮೋಟಾರ್ ಇಂಜಿನ್ನ್ನು ಅಳವಡಿಸಲು ಸಹಾಯಧನ ಘೋಷಣೆ ಮಾಡಿರುವುದು ಮೀನುಗಾರರಿಗೆ ಅನುಕೂಲವಾಗಲಿದೆ. ಮೀನುಗಾರರಿಗೆ ಇದೊಂದು ಆಶದಾಯಕವಾದ ಬಜೆಟ್ ಆಗಿದೆ ಎಂದು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಹೇಳಿದರು