ಕಾರವಾರ: ವೈಲ್ ವಾಡಾ ಗ್ರಾಪಂ ವ್ಯಾಪ್ತಿಯ ಉಮ್ಮಳೆಜೂಗ್ ನ ಜನರ ಹಿತಕ್ಕಾಗಿ ಸರಕಾರ ನಿರ್ಮಿಸಿದ ಸೇತುವೆ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಉಮ್ಮಳೆಜೂಗ್ ಜನರು ನಡುಗಡ್ಡೆಯಲ್ಲಿ ವಾಸವಾಗಿರುವ ಜನರಾಗಿದ್ದಾರೆ. ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು, ನಗರಕ್ಕೆ ಬರಬೇಕಾದರೆ ದೋಣಿಯ ಮೂಲಕ ಈ ಹಿಂದೆ ಬರಬೇಕಾಗಿತ್ತು. ಆದರೆ ಸಾಕಷ್ಟು ಬೇಡಿಕೆಯ ಬಳಿಕ ಸರಕಾರ 10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದೆ.
ಆದರೆ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸದೆ ಇದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಸೇತುವೆಯ ಅಂತ್ಯದ ಸ್ಥಳೀಯರ ಜಾಗದ ಕಾಲು ದಾರಿಯ ಮೂಲಕ ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದರು. ಜನರು ತುರ್ತು ಚಿಕಿತ್ಸೆಗಾಗಿಯೂ ಇದೇ ಮಾರ್ಗದಿಂದ ತೆರಳುತ್ತಿದ್ದರು. ಈ ನಡುವೆ ಜಾಗದ ಮಾಲೀಕರು ಪರಿಹಾರ ನೀಡಿಲ್ಲ ಎನ್ನುವ ಕಾರಣಕ್ಕೆ ಸೇತುವೆ ಮುಕ್ತಾಯದ ಜಾಗದ, ಕಾಲು ದಾರಿಯ ಪ್ರದೇಶದಲ್ಲಿ ಜೆಸಿಬಿ ಮೂಲಕ ಅಗೆಸಿದ್ದಾರೆ.
ಇದರಿಂದ ಉಮ್ಮಳೆಜೂಗ್ ಜನರಿಗೆ ಏಕೈಕ ಮಾರ್ಗ ಬಂದ್ ಆಗಿದೆ. ಜನರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದಿನಂತೆ ನದಿಯ ಮೂಲಕ ತೆರಳಲು ದೋಣಿಯು ಇಲ್ಲದಂತಾಗಿದೆ ಎನ್ನುವುದು ಗ್ರಾಮಸ್ಥರ ದೂರಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾಗೂ ಗ್ರಾಮದ ಅಭಿವೃದ್ಧಿಗಾಗಿ, ಜನರ ಅನುಕೂಲಕ್ಕೆ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯ ಮಾಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ ಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಹ ಸಲ್ಲಿಸಲಾಗಿದೆ. ಈ ವೇಳೆ ಕೇವಲ ತಾಮ್ಸೆ, ದೀಪಕ ತಾಮ್ಸೆ, ಸಾಯಿನಾಥ ತಾಮ್ಸೆ, ಸಂದೀಪ ತಾಮ್ಸೆ, ಸಂಜನಾ ತಾಮ್ಸೆ ಇದ್ದರು.